ಹೆಣ್ಣು ಭ್ರೂಣ ಹತ್ಯೆಗೆ ಸುಪ್ರೀಂಕೋರ್ಟ್ (ಪ್ರಜಾವಾಣಿ, ಮಾ.4) ಆಕ್ರೋಶ ವ್ಯಕ್ತಪಡಿಸಿರುವುದು ಸೂಕ್ತವಾಗಿದೆ. ಭ್ರೂಣಹತ್ಯೆ ತಡೆಯಲು ಕಾಯ್ದೆ ಅಡಿಯಲ್ಲಿ ಕರ್ನಾಟಕ ಸರಕಾರ ಎಲ್ಲ ಜಿಲ್ಲೆಗಳಲ್ಲಿ ರಚಿಸಿದ ಜಿಲ್ಲಾಮಟ್ಟದ ಸಮಿತಿಗಳು ಕ್ರಿಯಾಶೀಲವಾಗಬೇಕಿವೆ.
ಕರ್ನಾಟಕ ಶಿಶು ಲಿಂಗ ಅನುಪಾತ (ಆರು ವರ್ಷಗಳವರೆಗಿನ ಮಕ್ಕಳ ಗುಂಪಿನಲ್ಲಿ ಪ್ರತಿ ಸಾವಿರ ಹುಡುಗರಿಗೆ ಹುಡುಗಿಯರ ಸಂಖ್ಯೆ) 1991 ರಲ್ಲಿ 960, 2001 ರಲ್ಲಿ 946 ಮತ್ತು 2011 ರಲ್ಲಿ 943ಕ್ಕೆ ಇಳಿಕೆಯಾಗಿದೆ.ತುಮಕೂರು ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಗಂಡು, ಹೆಣ್ಣು ಮಕ್ಕಳ ಅನುಪಾತ ಕಳವಳಕಾರಿ ಸ್ಥಿತಿಯಲ್ಲಿದೆ. ಉದಾಹರಣೆಗೆ ಸಾವಿರ ಗಂಡು ಮಕ್ಕಳಿಗೆ ಶಿರಾದಲ್ಲಿ 845, ತುಮಕೂರು ತಾಲ್ಲೂಕಿನಲ್ಲಿ 903, ಪಾವಗಡದಲ್ಲಿ 907, ಕೊರಟಗೆರೆಯಲ್ಲಿ 909 ಹೆಣ್ಣುಮಕ್ಕಳು ಇದ್ದುದು ಕಂಡುಬಂದಿದೆ.
ಒಂದು ಮೂಲದ ಪ್ರಕಾರ ರಾಜ್ಯದಲ್ಲಿ ನೊಂದಣಿಯಾದ/ಯಾಗದ ಒಟ್ಟು ಆಸ್ಪತ್ರೆಗಳ ಸಂಖ್ಯೆ 3000 ಕ್ಕಿಂತ ಹೆಚ್ಚಾಗಿದ್ದು ಅವುಗಳಲ್ಲಿ 2002 ರಿಂದ ಇಲ್ಲಿಯವರೆಗೆ ಅಂದರೆ 10 ವರ್ಷಗಳಲ್ಲಿ ಕಾಯ್ದೆ ಅಡಿಯಲ್ಲಿ ಕೇವಲ 23 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ.
ಅಂದರೆ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ತಪ್ಪು ಮಾತ್ರ ಆಗಿದೆಯೇ? ಈ ಅಂಕಿ-ಅಂಶಗಳನ್ನು ಗಮನಿಸಿದಲ್ಲಿ, ಕಾಯ್ದೆ ಅಡಿಯಲ್ಲಿ ರಚಿಸಿದ ಸಮಿತಿಗಳು ಸಂಪೂರ್ಣ ನಿಷ್ಕ್ರಿಯವಾಗಿವೆ ಮತ್ತು ಆರೋಗ್ಯ ಮತ್ತು ಕುಟುಂಬ ಇಲಾಖೆಯು ಈ ಕಾಯ್ದೆ ಜಾರಿ ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಬಹುದು.