ಕೊಪ್ಪಳ: ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರಿಗೆ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಬಳಿಕ ನಗರದ ಗವಿಮಠದ ಗವಿದ್ದೇಶ್ವರ ದರ್ಶನ ಪಡೆದು, ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಆರಂಭವಾದ ಮೆರವಣಿಗೆಯೂ ಗಡಿಯಾರ ಕಂಬ, ಅಶೋಕ ವೃತ್ತ ಮತ್ತು ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು.
ಮೆರವಣಿಗೆಯಲ್ಲಿ ಡೊಳ್ಳು ಮತ್ತು ಅನೇಕ ವಾದ್ಯಗಳ ನಾದ ಮೆರವಣಿಗೆಯ ರಂಗನ್ನು ಹೆಚ್ಚಿಸಿತು. ಅಲ್ಲದೇ ಮಜಲು ಗೊಂಬೆಗಳು ನೋಡುಗರ ಗಮನ ಸೆಳೆದವು.
ಬಿಜೆಪಿ ಧ್ವಜ, ಟೋಪಿ ಹಾಗೂ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ, ಬಿಜೆಪಿ ಪರ, ಮೋದಿ, ಸಂಗಣ್ಣ ಕರಡಿ ಪರವಾಗಿ ಘೋಷಣೆಗಳನ್ನು ಕೂಗಿದರು.
ಸುತ್ತಮುತ್ತಲಿನ ಭಾಗ್ಯನಗರ, ಹಿರೇಸಿಂಧೋಗಿ, ಓಜನಹಳ್ಳಿ, ಗಿಣಿಗೇರಾ, ಗಂಗಾವತಿ, ಯಲಬುರ್ಗಾ, ಕುಷ್ಟಗಿ ಸೇರಿದಂತೆ ವಿವಿಧ ಕಡೆಗಳಿಂದ ಮಿನಿ ಬಸ್, ಟ್ರ್ಯಾಕ್ಟರ್, ಟಂ ಟಂ, ಕಾರು ಸೇರಿ ವಿವಿಧ ವಾಹನಗಳ ಮೂಲಕ ಮಹಿಳೆಯರು, ಯುವಕರು ಎಲ್ಲರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಾಜಿ ಸಚಿವರಾದ ಲಕ್ಷ್ಮಣ್ಣ ಸವದಿ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಗೂರು, ಪಕ್ಷದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಹೇಮಲತಾ ನಾಯಕ, ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸಿ.ವಿ.ಚಂದ್ರಶೇಖರ, ವಕೀಲ ವಿ.ಎಂ.ಭೂಸನೂರಮಠ, ಚಂದ್ರಶೇಖರ ಕವಲೂರು ಇದ್ದರು.