ವಾಸ್ತುಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಮನುಷ್ಯನ ಮನಸ್ಸನ್ನು ವಾಸ್ತು ಯೋಗ್ಯವಾಗಿ ಇಡುತ್ತದೆ. ಇದಕ್ಕೆ ವೇದಗಳಲ್ಲಿ ಹಾಗೂ ಪುರಾತನ ಶಾಸ್ತ್ರಗಳಲ್ಲಿ ಆಧಾರ ಇದೆ.
ಮನುಷ್ಯ ಸಂಘಜೀವಿ. ಪ್ರಕೃತಿಯಲ್ಲಿ ಮನುಷ್ಯ ಸಂಘಟಿತವಾಗಿ ಬದುಕುವ ಪ್ರವೃತ್ತಿ ಬೆಳೆಸಿಕೊಂಡಿದ್ದಾನೆ. ಭೂಮಿಯಲ್ಲಿರುವ ಬಹುತೇಕ ಜೀವಿಗಳಿಗೆ ಇಂತಹ ಪ್ರವೃತ್ತಿ ಇಲ್ಲ. ಇದ್ದರೂ ಸಣ್ಣಪುಟ್ಟ ಪ್ರಮಾಣದಲ್ಲಿ ಮಾತ್ರ ಇರುತ್ತದೆ. ಸಂಘಟನೆ ಮನುಷ್ಯನಿಗೆ ಮುಖ್ಯ. ಮನುಷ್ಯ ಜೀವನ ವ್ಯವಸ್ಥಿತವಾಗಿ ಆಗಲು ವಿವೇಕ, ವಿಚಕ್ಷಣೆ ಹಾಗೂ ಸಂಸ್ಕಾರದ ತಳಹದಿ ಅಗತ್ಯ. ಉತ್ತಮ ತಳಹದಿಯಿಂದ ಬದುಕಲು ಮನುಷ್ಯ ಕೆಲವು ನಿಯಮಗಳನ್ನು ಮಾಡಿಕೊಂಡು ಬದುಕಬೇಕಿದೆ. ವಾಸಸ್ಥಾನದಲ್ಲಿ ಸೂಕ್ತ ಗಾಳಿ, ಬೆಳಕು, ಪ್ರಕೃತಿ ಸಂಪತ್ತು ಮತ್ತಿತರ ಅಂಶಗಳು ಇರಬೇಕಿದೆ. ಈ ಅಂಶಗಳು ವಾಸ್ತುವಿನಲ್ಲಿ ಸೇರಿವೆ. ಇವುಗಳು ವೇದಗಳ ಕಾಲದಿಂದಲೂ ವಾಸ್ತುವಿನಲ್ಲಿ ಉಲ್ಲೇಖ ಆಗಿವೆ. ವಾಸ್ತುವಿಗೆ ವೈಜ್ಞಾನಿಕ ತಳಹದಿ ಇದೆ. ಇದರಲ್ಲಿ ಅನುಮಾನವೇ ಇಲ್ಲ.
ಚೆನ್ನಾಗಿ ಬದುಕಲು ಸೂರ್ಯ ರಶ್ಮಿ ಪ್ರತಿಯೊಬ್ಬ ಜೀವಿಗೂ ತಾಕುವುದು ಅವಶ್ಯಕ. ಪಂಚಭೂತಗಳು, ಸೂರ್ಯಕಿರಣಗಳ ಸದ್ಬಳಕೆ, ಗರಿಷ್ಠ ಪ್ರಯೋಜನದ ಮಾಹಿತಿ ವಾಸ್ತುವಿನಲ್ಲಿ ಇದೆ.
ವಾಸ್ತುಶಾಸ್ತ್ರ ಇಂದು ಕೆಲವು ಅಪಾಪೋಲಿಗಳ ಕೈಗೆ ಸಿಕ್ಕಿ ದುಡ್ಡು ಮಾಡಿಕೊಳ್ಳುವ ವ್ಯವಹಾರವಾಗಿ ಬೆಳೆದಿರುವುದು ನೋವಿನ ಸಂಗತಿ.
ಮನೆ ಬಾಗಿಲು ಅಥವಾ ಕಿಟಕಿ ಎಲ್ಲಿಡಬೇಕು ಎಂಬುದಕ್ಕೆ ಮಾತ್ರ ವಾಸ್ತುಶಾಸ್ತ್ರ ಸೀಮಿತ ಅಲ್ಲ. ಅದಕ್ಕಿಂತ ಮಿಗಿಲಾದ ವಿಸ್ತಾರವಾದ ಅಂಶಗಳು ಈ ಶಾಸ್ತ್ರದಲ್ಲಿ ಇವೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಅವಲಂಬಿಸಿ ಈ ಶಾಸ್ತ್ರ ರೂಪುಗೊಂಡಿದೆ. ವಾಸ್ತು ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಉದಾಹರಣೆಗೆ ಮಂಗಳೂರು, ಬೆಂಗಳೂರು, ಮೈಸೂರಿಗೆ ವಾಸ್ತು ಬೇರೆಯೇ. ಅಲ್ಲಿನ ಹವಾಗುಣ, ಮಣ್ಣಿನ ಲಕ್ಷಣ, ಪ್ರಕೃತಿಯ ಇತರೆ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ವಾಸ್ತುವಿನ ನಿರ್ಣಯ ಮಾಡ ಲಾಗುತ್ತದೆ.
‘ಮನೆಯನ್ನು ಪರಿಪೂರ್ಣ ಗೃಹ’ (convert the house into home) ವನ್ನಾಗಿ ಪರಿವರ್ತನೆ ಮಾಡುವುದೇ ವಾಸ್ತು. ಮನೆಯಲ್ಲಿ ಸಂಸ್ಕಾರ ಬೆಳೆ ಯಲು ಶಾಸ್ತ್ರ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಇದೇ ಶಾಸ್ತ್ರದ ವೈಶಿಷ್ಟ್ಯ. ವಾಸ್ತುಶಾಸ್ತ್ರವನ್ನು ಸಂಶಯದಿಂದ ನೋಡು ವುದು ತರವಲ್ಲ. ಜನರಲ್ಲಿ ಮೌಢ್ಯವನ್ನು ಬಿತ್ತುವ ಕೆಲಸವನ್ನು ಉತ್ತಮ ವಾಸ್ತುಶಾಸ್ತ್ರಜ್ಞರು ಮಾಡುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.