ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು ಬಚ್ಚಿಟ್ಟಿದ್ದರೆ ಬಯಲು ಮಾಡಿ, ಇಲ್ಲದಿದ್ದರೆ ನಿಷೇಧ ಖಚಿತ: ಬಿಸಿಸಿಐ

Last Updated 3 ಆಗಸ್ಟ್ 2020, 11:16 IST
ಅಕ್ಷರ ಗಾತ್ರ

ನವದೆಹಲಿ: ನೋಂದಾಯಿತ ಆಟಗಾರರು ಯಾವತ್ತಾದರೂ ವಯಸ್ಸು ಬಚ್ಚಿಟ್ಟಿದ್ದರೆ ತಪ್ಪೊಪ್ಪಿಕೊಳ್ಳಬೇಕು. ಹೀಗೆ ಮಾಡದೇ ಎಂದಾದರೂ ಸಿಕ್ಕಿಬಿದ್ದರೆ ಎರಡು ವರ್ಷಗಳ ನಿಷೇಧ ಶಿಕ್ಷೆ ಖಚಿತ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ತಿಳಿಸಿದೆ. ಈ ಮಾನದಂಡವು 2020–21ರ ಸಾಲಿನಲ್ಲಿ ವಯೋಮಾನ ವಿಭಾಗದಲ್ಲಿ ಆಡುವ ಎಲ್ಲ ಆಟಗಾರರಿಗೂ ಅನ್ವಯವಾಗುತ್ತದೆ ಎಂದು ಅದು ತಿಳಿಸಿದೆ.

‘ಆಟಗಾರರು ನಿಜವಾದ ವಯಸ್ಸು ಬಚ್ಚಿಡುವುದಕ್ಕಾಗಿ ಜನನ ಪ್ರಮಾಣ ಪತ್ರದಲ್ಲಿ ಗೋಲ್‌ಮಾಲ್ ಮಾಡಿದ್ದು ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನ್ನು ಒಪ್ಪಿಕೊಂಡರೆ ಕ್ಷಮಿಸಿ ಅವರ ನಿಜವಾದ ವಯಸ್ಸಿನ ವಿಭಾಗದಲ್ಲಿ ಆಡಲು ಅವಕಾಶ ನೀಡಲಾಗುವುದು. ಸಂಬಂಧಪಟ್ಟ ದಾಖಲೆಗಳನ್ನು ಸಹಿ ಮಾಡಿದ ಪತ್ರದೊಂದಿಗೆ ಬಿಸಿಸಿಐನ ವಯಸ್ಸು ಪರಿಶೀಲನೆ ವಿಭಾಗದಕ್ಕೆ ಸೆಪ್ಟೆಂಬರ್ 15ರ ಒಳಗೆ ಕಳುಹಿಸಬೇಕು ಅಥವಾ ಇ–ಮೇಲ್ ಮಾಡಬೇಕು. ಈ ಯೋಜನೆಯ ಲಾಭ ಪಡೆದುಕೊಳ್ಳಲು ಮುಂದಾಗದೆ ಭವಿಷ್ಯದಲ್ಲಿ ಸಿಕ್ಕಿಬಿದ್ದರೆ ಕ್ರಿಕೆಟ್‌ನಿಂದ ನಿಷೇಧ ಮಾಡಲಾಗುವುದು. ಅದು ಮುಗಿದ ನಂತರ ಮತ್ತೆಂದೂ ಬಿಸಿಸಿಐ ಅಥವಾ ರಾಜ್ಯ ಸಂಸ್ಥೆಗಳ ವಯೋಮಾನ ವಿಭಾಗದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ’ ಎಂದು ಪ್ರಕಟಣೆಯಲ್ಲಿ ಬಿಸಿಸಿಐ ಸೋಮವಾರ ತಿಳಿಸಿದೆ.

ವಾಸಸ್ಥಳಕ್ಕೆ ಸಂಬಂಧಿಸಿ ಸುಳ್ಳು ಮಾಹಿತಿಗಳನ್ನು ನೀಡುವ ಆಟಗಾರರನ್ನೂ ನಿಷೇಧ ಶಿಕ್ಷೆಗೆ ಒಳಪಡಿಸಲಾಗುವುದು. ಸೀನಿಯರ್ ಪುರುಷರು ಮತ್ತು ಮಹಿಳೆಯರಿಗೂ ಇದು ಅನ್ವಯವಾಗುತ್ತದೆ. ವಿಳಾಸದ ಬಗ್ಗೆ ತಪ್ಪು ಮಾಹಿತಿ ನೀಡುವವರಿಗೆ ‘ಸ್ವಯಂ ಬಹಿರಂಗ ಯೋಜನೆ‘ ಅನ್ವಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. 16 ವರ್ಷದೊಳಗಿನವರ ವಿಭಾಗದ ಟೂರ್ನಿಗಳಲ್ಲಿ 14ರಿಂದ 16 ವಯೋಮಾನದವರಿಗೆ ಅವಕಾಶ ನೀಡಲಾಗುವುದು ಎಂದು ಕೂಡ ಅದು ಹೇಳಿದೆ.

ವಯಸ್ಸಿಗೆ ಸಂಬಂಧಿಸಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಬೇರೆ ವಯೋಮಾನದವರ ವಿಭಾಗದಲ್ಲಿ ಆಡುವುದನ್ನು ತಡೆಯಲು ಕಠಿಣ ನಿಯಮ ಜಾರಿಗೆ ತರಬೇಕು ಎಂದು ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಹಿಂದಿನಿಂದಲೇ ಒತ್ತಾಯಿಸುತ್ತಿದ್ದರು. ವಯೋಮಾನ ವಿಭಾಗದವರ ಸ್ಪರ್ಧೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ಬಿಸಿಸಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

’ವಯಸ್ಸಿನ ಸುಳ್ಳು ದಾಖಲೆಗಳಿಗೆ ಸಂಬಂಧಿಸಿ ಸ್ವಯಂ ಘೋಷಣೆ ಮಾಡಿಕೊಳ್ಳುವವರ ನೆರವಿವಾಗಿ 24x7 ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಕ್ರಮಬದ್ಧ ಪರಿಶೀಲನೆಯನ್ನೂ ಮಾಡಲಾಗುತ್ತದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದರು.

‘ವಯಸ್ಸಿಗೆ ಸಂಬಂಧಿಸಿ ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಭಾರಿ ದೊಡ್ಡ ತಪ್ಪು. ಅದು ಕ್ರೀಡೆಗೆ ಮಾರಕ. ನಿಗದಿತ ವಯೋಮಾನ ವಿಭಾಗದಲ್ಲಿ ಆಡುವ ಯುವ ಆಟಗಾರರಿಗೆ ಇದರಿಂದ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ತೊಡಕಾಗುತ್ತದೆ. ಆದ್ದರಿಂದ ಬಿಸಿಸಿಐ ಜಾರಿಗೆ ತಂದಿರುವ ಯೋಜನೆಯಡಿ ತಪ್ಪು ತಿದ್ದಿಕೊಳ್ಳಲು ಮುಂದಾಗಬೇಕು‘ ಎಂದು ರಾಹುಲ್ ದ್ರಾವಿಡ್ ಯುವ ಆಟಗಾರರಿಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT