ನವದೆಹಲಿ: ಭಾರತ ತಂಡ ಇಂಗ್ಲೆಂಡ್ ಎದುರಿನ ಕ್ರಿಕೆಟ್ ಸರಣಿಗಳಲ್ಲಿ ವೈಫಲ್ಯ ಕಂಡಿರುವ ಬಗ್ಗೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ಶೀಘ್ರವೇ ಮುಖ್ಯ ಕೋಚ್ ರವಿಶಾಸ್ತ್ರಿಯೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ಬಳಗ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಸೋಲು ಕಂಡಿತ್ತು. ಈ ಕುರಿತು ಶಾಸ್ತ್ರಿ ಅವರಿಂದ ವಿವರಣೆ ಪಡೆಯುವ ಸಂಭವ ಇದೆ.
‘ಸೆಪ್ಟೆಂಬರ್ 11ರಂದು ಮುಂಬೈಯಲ್ಲಿ ಸಿಒಎ ಸಭೆ ನಡೆಯಲಿದ್ದು ಇದರಲ್ಲಿ ಭಾರತ ತಂಡದ ವೈಫಲ್ಯದ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಈ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಅವರಿಂದಲೂ ವಿವರಣೆ ಪಡೆಯಲಾಗುತ್ತದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.