ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ: ಕುಕ್‌ ವಿದಾಯಕ್ಕೆ ಶತಕದ ವೈಭವ

ನಾಯಕ ರೂಟ್ ಅಮೋಘ ಬ್ಯಾಟಿಂಗ್‌
Last Updated 10 ಸೆಪ್ಟೆಂಬರ್ 2018, 17:02 IST
ಅಕ್ಷರ ಗಾತ್ರ

ಲಂಡನ್‌: ಹನುಮ ವಿಹಾರಿ ಹಾಕಿದ 95ನೇ ಓವರ್‌ನ ಎರಡನೇ ಎಸೆತ. ಎಡಗೈ ಬ್ಯಾಟ್ಸ್‌ಮನ್‌ ಅಲೆಸ್ಟರ್ ಕುಕ್‌ ಆಫ್‌ ಬ್ರೆಕ್ ಎಸೆತವನ್ನು ಕಟ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟಿನ ಅಂಚಿಗೆ ಸವರಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಕೈ ಸೇರಿತು.

ಗ್ಯಾಲರಿಗಳಲ್ಲಿ ತುಂಬಿದ್ದ ಕ್ರಿಕೆಟ್ ಪ್ರಿಯರು ಎದ್ದು ನಿಂತು ಚಪ್ಪಾಳೆ ತಟ್ಟಿದರೆ, ಭಾರತದ ಆಟಗಾರರೆಲ್ಲರೂ ಕುಕ್ ಬಳಿಗೆ ಧಾವಿಸಿದರು. ಅವರ ಬೆನ್ನು ತಟ್ಟಿ ಅಭಿನಂದಿಸಿದರು. ಅವರು ಶತಕ ಗಳಿಸಿದ್ದಕ್ಕೆ ಅಲ್ಲ. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಇನಿಂಗ್ಸ್ ಆಗಿತ್ತು.

ಕುಕ್ (147; 286 ಎಸೆತ, 14 ಬೌಂಡರಿ) ಮತ್ತು ನಾಯಕ ಜೋ ರೂಟ್‌ (125; 190 ಎಸೆತ, 1 ಸಿಕ್ಸರ್‌, 12 ಬೌಂಡರಿ) ಅವರ ಶತಕ ಹಾಗೂ ಇವರಿಬ್ಬರು ಮೂರನೇ ವಿಕೆಟ್‌ಗೆ ಸೇರಿಸಿದ 259 ರನ್‌ಗಳ ಬಲದಿಂದ ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಹಿಡಿತ ಬಿಗಿಗೊಳಿಸಿದೆ. ಎರಡನೇ ಇನಿಂಗ್ಸ್‌ ಅನ್ನು 423 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿರುವ ತಂಡ ಒಟ್ಟಾರೆ 463 ರನ್‌ ಮುನ್ನಡೆ ಸಾಧಿಸಿದ್ದು ಭಾರತದ ಗೆಲುವಿಗೆ ಭಾರಿ ಸವಾಲು ಒಡ್ಡಿದೆ.

ಮೂರನೇ ದಿನವಾದ ಭಾನುವಾರದ ಅಂತ್ಯ ತಲಾ 46 ಮತ್ತು 29 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದ ಕುಕ್ ಮತ್ತು ಜೋ ರೂಟ್ ಅವರು ಸೋಮವಾರ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಭಾರತದ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳು ಬಗೆ ಬಗೆಯ ಅಸ್ತ್ರ ಪ್ರಯೋಗಿಸಿದರೂ ಇವರ ಏಕಾಗ್ರತೆಗೆ ಭಂಗ ತರಲು ಆಗಲಿಲ್ಲ.

ವಿದಾಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಕುಕ್‌ ಸೋಮವಾರ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಕ್ರಮೇಣ ಆಕ್ರಮಣಕಾರಿ ಹೊಡೆತಗಳೊಂದಿಗೆ ರಂಜಿಸಿದರು. 116 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು. ಇದರೊಂದಿಗೆ ಪದಾರ್ಪಣೆ ಪಂದ್ಯದಲ್ಲಿ ಮತ್ತು ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್‌ ಎಂದೆನಿಸಿದರು. 2006ರಲ್ಲಿ ನಾಗಪುರದಲ್ಲಿ ಭಾರತದ ವಿರುದ್ಧ ಪದಾರ್ಪಣೆ ಪಂದ್ಯದಲ್ಲೂ ಅವರು ಶತಕ ಸಿಡಿಸಿದ್ದರು.

ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ನ 12ನೇ ಬ್ಯಾಟ್ಸ್‌ಮನ್ ಎನಿಸಿದರು. 160 ಟೆಸ್ಟ್ ಪಂದ್ಯಗಳಲ್ಲಿ 12254 ರನ್‌ ಗಳಿಸಿದ ಕುಕ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎಡಗೈ ಬ್ಯಾಟ್ಸ್‌ಮನ್ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ಹನುಮ ವಿಹಾರಿ ಮ್ಯಾಜಿಕ್‌: ಪದಾರ್ಪಣೆ ಪಂದ್ಯ ಆಡಿದ ಹನುಮ ವಿಹಾರಿ 95ನೇ ಓವರ್‌ನಲ್ಲಿ ಮ್ಯಾಜಿಕ್ ಮಾಡಿದರು. ಮೊದಲ ಎಸೆತದಲ್ಲಿ ಜೋ ರೂಟ್ ಅವರ ವಿಕೆಟ್ ಪಡೆದ ಅವರು ನಂತರದ ಎಸೆತದಲ್ಲಿ ಕುಕ್ ಅವರನ್ನೂ ವಾಪಸ್ ಕಳುಹಿಸಿದರು. ಆದರೆ ಹ್ಯಾಟ್ರಿಕ್ ಸಾಧನೆ ಮಾಡುವ ಅವರ ಕನಸು ಕನಸಾಗಲಿಲ್ಲ.

ಇವರಿಬ್ಬರು ಔಟಾದ ನಂತರ ಸ್ಯಾಮ್ ಕರನ್ ಮತ್ತು ಆದಿಲ್ ರಶೀದ್ ಉತ್ತಮ ಆಟವಾಡಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

ಸಂಕಷ್ಟದಲ್ಲಿ ಭಾರತ: ಬ್ಯಾಟಿಂಗ್ ಆರಂಭಿಸಿದ ಭಾರತ ಸಂಕಷ್ಟಕ್ಕೆ ಒಳಗಾಗಿದೆ. ನಾಲ್ಕು ಓವರ್‌ಗಳಲ್ಲಿ ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT