ಗುವಾಹಟಿ: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಎವಿನ್ ಲೂಯಿಸ್ ಭಾರತದ ಎದುರಿನ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಸರಣಿಗಳಿಂದ ಹಿಂದೆ ಸರಿದಿದ್ದಾರೆ.
‘ವೈಯಕ್ತಿಕ ಕಾರಣಗಳಿಂದ ಲೂಯಿಸ್ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಶುಕ್ರವಾರ ತಿಳಿಸಿದೆ.
ಲೂಯಿಸ್ ಬದಲು ಕೀರನ್ ಪೊವೆಲ್ ಮತ್ತು ನಿಕೊಲಸ್ ಪೂರಣ್ ಅವರು ಕ್ರಮವಾಗಿ ಏಕದಿನ ಮತ್ತು ಟ್ವೆಂಟಿ–20 ತಂಡಗಳಿಗೆ ಆಯ್ಕೆಯಾಗಿದ್ದಾರೆ.
ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಅವರೂ ಟೂರ್ನಿಗೆ ಅಲಭ್ಯರಾಗಿರುವುದು ವಿಂಡೀಸ್ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಟ್ವೆಂಟಿ–20 ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದ ವೇಗದ ಬೌಲರ್ ಒಬೆದ್ ಮೆಕಾಯ್ಗೆ ಏಕದಿನ ತಂಡದಲ್ಲೂ ಸ್ಥಾನ ಕಲ್ಪಿಸಲಾಗಿದೆ.
ವಿಂಡೀಸ್ ಮತ್ತು ಭಾರತ ನಡುವಣ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಹೋರಾಟ ಭಾನುವಾರ ಗುವಾಹಟಿಯಲ್ಲಿ ಜರುಗಲಿದೆ. ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯ ಮೊದಲ ಹಣಾಹಣಿ ನವೆಂಬರ್ 4ರಂದು ಕೋಲ್ಕತ್ತದಲ್ಲಿ ನಿಗದಿಯಾಗಿದೆ.