ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಹರಣ ತಡೆಗಟ್ಟಲು ಏಕದಿನ, ಟಿ20ಗೆ ‘ಸ್ಟಾಪ್‌ ಕ್ಲಾಕ್‌’ ಜಾರಿ

Published 15 ಮಾರ್ಚ್ 2024, 15:42 IST
Last Updated 15 ಮಾರ್ಚ್ 2024, 15:42 IST
ಅಕ್ಷರ ಗಾತ್ರ

ದುಬೈ: ಕಾಲಹರಣ ತಡೆಗಟ್ಟುವ ಕ್ರಮವಾಗಿ ‘ಸ್ಟಾಪ್‌ ಕ್ಲಾಕ್‌’ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶುಕ್ರವಾರ ಪ್ರಕಟಿಸಿದೆ. ಇದರ ಅನ್ವಯ ಫೀಲ್ಡಿಂಗ್ ಮಾಡುವ ತಂಡ ಹಿಂದಿನ ಓವರ್‌ ಮುಗಿಸಿ ಹೊಸ ಓವರನ್ನು 60 ಸೆಕೆಂಡುಗಳ ಒಳಗೆ ಆರಂಭಿಸಬೇಕಾಗುತ್ತದೆ. ಇಲ್ಲವಾದರೆ ದಂಡದ ರೂಪದಲ್ಲಿ ರನ್‌ಗಳನ್ನು ನೀಡಬೇಕಾಗುತ್ತದೆ. ಇದು ಈ ವರ್ಷದ ಐಸಿಸಿ  ಟಿ20 ವಿಶ್ವಕಪ್‌ನಿಂದಲೇ ಜಾರಿಗೆ ಬರಲಿದೆ.

ಈಗ ಪ್ರಾಯೋಗಿಕ ಹಂತದಲ್ಲಿರುವ ಸ್ಟಾಪ್‌ ಕ್ಲಾಕ್‌ ವ್ಯವಸ್ಥೆಯನ್ನು 2023ರ ಡಿಸೆಂಬರ್‌ನಲ್ಲಿ ಪರಿಚಯಿಸಲಾಗಿತ್ತು. ಜೂನ್‌ 1ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನಿಂದಲೇ ಆಟದ ಪ್ರಮಾಣೀಕೃತ ನಿಯಮಗಳಲ್ಲಿ ಸ್ಟಾಪ್‌ ಕ್ಲಾಕ್‌ ಅನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಬಾರಿಯ ಟಿ20 ವಿಶ್ವಕಪ್‌ ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

60 ಸೆಕೆಂಡುಗಳ ಒಳಗೆ ತಂಡ ಓವರ್‌ ಆರಂಭಿಸಲು ವಿಫಲವಾದಲ್ಲಿ ಎರಡು ಸಲ ಎಚ್ಚರಿಕೆ ನೀಡಲಾಗುತ್ತದೆ. ನಂತರದ ಪ್ರತಿ ಉಲ್ಲಂಘನೆಗೆ ಐದು ರನ್‌ಗಳನ್ನು ಎದುರಾಳಿ ತಂಡಕ್ಕೆ ದಂಡವಾಗಿ ನೀಡಬೇಕಾಗುತ್ತದೆ. 

‘ಜೂನ್‌ 2024ರಿಂದ ಅನ್ವಯವಾಗುವಂತೆ ಎಲ್ಲ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸ್ಟಾಪ್‌ಕ್ಲಾಕ್‌ ವ್ಯವಸ್ಥೆ ಅನುಷ್ಠಾನವಾಗಲಿದೆ. ಇದರಂತೆ ಮೊದಲು ಟಿ20 ವಿಶ್ವಕಪ್‌ನಲ್ಲೇ ಅನುಷ್ಠಾನಗೊಳ್ಳಲಿದೆ’ ಎಂದು ಐಸಿಸಿ ತನ್ನ ವಾರ್ಷಿಕ ಮಹಾಸಭೆಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.

‘ಇದರ ಟ್ರಯಲ್‌ ಬರುವ ಏಪ್ರಿಲ್‌ವರೆಗೆ ನಡೆಯಬೇಕಿತ್ತು. ಆದರೆ ಈ ಪ್ರಯೋಗ ಈಗಾಗಲೇ ನಿರೀಕ್ಷಿತ ಫಲಿತಾಂಶಗಳನ್ನು ನೀಡಿದೆ. ಪಂದ್ಯಗಳು ನಿಗದಿ ಅವಧಿಯಲ್ಲಿ ಮುಗಿಯುತ್ತಿದ್ದು, ಪ್ರತಿ ಪಂದ್ಯದಲ್ಲಿ 20 ನಿಮಿಷಗಳವರೆಗೆ ಉಳಿತಾಯವಾಗುತ್ತಿದೆ’ ಎಂದು ಹೇಳಿಕೆ ತಿಳಿಸಿದೆ.

60 ರಿಂದ 0ವರೆಗೆ ಕೌಂಟ್‌ಡೌನ್‌ ಮಾಡುವ ಎಲೆಕ್ಟ್ರಾನಿಕ್‌ ಗಡಿಯಾರವನ್ನು ಕ್ರೀಡಾಂಗಣದಲ್ಲಿ ಅಳವಡಿಸಲಾಗುತ್ತದೆ. ಕ್ಲಾಕ್‌ನ ಅರಂಭವನ್ನು ಮೂರನೇ ಅಂಪೈರ್ ನಿರ್ಧರಿಸಲಿದ್ದಾರೆ.

ಆದರೆ ಐಸಿಸಿಯು ನಿಯಮಗಳಿಗೆ ಕೆಲವು ಅಪವಾದಗಳನ್ನೂ ನಿಗದಿಪಡಿಸಿದೆ. ಆರಂಭವಾದ ಕೌಂಟ್‌ಡೌನ್‌ಅನ್ನು ಕೆಲವು ಸಂದರ್ಭಗಳಲ್ಲಿ ರದ್ದುಗೊಳಿಸಲು ಅವಕಾಶವಿದೆ.

ಓವರುಗಳ ನಡುವೆ ಹೊಸ ಬ್ಯಾಟರ್ ಆಡಲು ಬಂದಲ್ಲಿ, ಅಧಿಕೃತ ಡ್ರಿಂಕ್ಸ್‌ ವಿರಾಮದ ವೇಳೆ, ಫೀಲ್ಡರ್‌ ಅಥವಾ ಬ್ಯಾಟರ್ ಗಾಯಾಳಾದಾಗ ಮೈದಾನದಲ್ಲೇ ಚಿಕಿತ್ಸೆ ನೀಡುವ ವೇಳೆ ಕ್ಷಣಗಣನೆ ರದ್ದುಮಾಡಲಾಗುತ್ತದೆ. ಕೆಲಸಂದರ್ಭಗಳಲ್ಲಿ ಪರಿಸ್ಥಿತಿ, ಕ್ಷೇತ್ರರಕ್ಷಣೆ ಮಾಡುವ ತಂಡದ ಕೈಮೀರಿದಲ್ಲಿ ಆಗಲೂ ಕ್ಲಾಕ್‌ನ ಕ್ಷಣಗಣನೆ ಸಕ್ರಿಯಗೊಳ್ಳುವುದಿಲ್ಲ’ ಎಂದೂ ಐಸಿಸಿ ತಿಳಿಸಿದೆ.

ಫೀಲ್ಡಿಂಗ್ ಮಾಡುವ ತಂಡಗಳು, ತಂತ್ರದ ಭಾಗವಾಗಿ ಪ್ರತಿ ಎಸೆತಗಳ ಮಧ್ಯೆ ಕ್ಷೇತ್ರರಕ್ಷಕರನ್ನು ಬದಲಾಯಿಸಿ ಪಂದ್ಯವನ್ನು ನಿಧಾನಗೊಳಿಸುತ್ತವೆ. ಇದುವರೆಗೆ ತಂಡ ಮತ್ತು ನಾಯಕನಿಗೆ ಹಣದ ರೂಪದಲ್ಲಿ ದಂಡ ವಿಧಿಸಲಾಗುತಿತ್ತು. ಆದರೆ ಇದು ಕಾಲಹರಣ ತಂತ್ರವನ್ನು ಪೂರ್ಣಪ್ರಮಾಣದಲ್ಲಿ ತಡೆಗಟ್ಟುವಲ್ಲಿ ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT