ಮಾಲೂರು: ಪಟ್ಟಣದಲ್ಲಿ ಶುಕ್ರವಾರ ಸಂಜೆ ಜೋರು ಮಳೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಮೋಡ ಕವಿದ ವಾತಾವರಣ ಇದ್ದು, ಜಿಟಿ ಜಿಟಿಯಾಗಿ ಆರಂಭವಾದ ಮಳೆಯು ಅರ್ಧ ಗಂಟೆಯವರೆಗೆ ಜೋರಾಗಿ ಸುರಿಯಿತು.ಮಳೆಯಿಂದಾಗಿ ತಾಲ್ಲೂಕಿನ ಮಾದನಹಟ್ಟಿ ಗ್ರಾಮದ ರೈತ ವೆಂಕಟೇಶಪ್ಪ ತಮ್ಮ 2 ಎಕರೆ ಭೂಮಿಯಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಈಗ ತಾನೇ ಹೂ ಮತ್ತು ಕಾಯಿಗಳಿಂದ ತುಂಬಿಕೊಂಡಿದ್ದ ಬೆಳೆ ಉತ್ತಮ ಬೆಲೆ ತರುವ ಕನಸು ಕಂಡಿದ್ದ ರೈತ ವೆಂಕಟೇಶಪ್ಪನ ಕನಸಿಗೆ ತಣ್ಣಿರೆರಚಿದೆ. ತಾಲ್ಲೂಕಿನ ನೊಸಗೆರೆ ಗ್ರಾಮದ ರೈತ ರಾಮಪ್ಪ ಒಂದು ಎಕರೆಯ ವಿಸ್ತೀರ್ಣದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಮಳೆಗೆ ಹಾಳಾಗಿದೆ.ಪಟ್ಟಣದ ಕಾರಂಜಿ ಬಡಾವಣೆಯ ಶ್ರೀಧರ್ ಎಂಬುವರ ಮನೆಯ ಚಾವಣಿ ಗಾಳಿಗೆ ಹಾರಿ ಹೋಗಿದ್ದು, ಮನೆಯೊಳಗೆ ನೀರು ನುಗ್ಗಿದೆ.