ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಚೆನ್ನೈನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಅನ್ನು 137 ರನ್ಗಳಿಗೆ ಕಟ್ಟಿ ಹಾಕಿದೆ.
20 ಓವರ್ಗಳಲ್ಲಿ 9 ವಿಕೆಟ್ಗೆ 137 ರನ್ ಗಳಿಸುವಲ್ಲಿ ಕೋಲ್ಕತ್ತ ಏದುಸಿರು ಬಿಟ್ಟಿತು. ಜಡೇಜಾ ಮಾರಕ ಬೌಲಿಂಗ್ ದಾಳಿಗೆ ಒಬ್ಬೊಬ್ಬರೆ ಫೆವಿಲಿಯನ್ ಸೇರಿದರು. ಜಡೇಜಾ ಪ್ರಮುಖ ಮೂರು ವಿಕೆಟ್ ಕಬಳಿಸಿದರು.
ಕೋಲ್ಕತ್ತ ಪರ ಸುನೀಲ್ ನರೈನ್ 27, ರಘುವಂಶಿ 24 ಹಾಗೂ ನಾಯಕ ಶ್ರೇಯಸ್ ಅಯ್ಯರ್ 34 ರನ್ ಗಳಿಸಿದ್ದೇ ಗರಿಷ್ಠ.
ಸತತ ಎರಡು ಸೋಲಿನ ಬಳಿಕ ಚೆನ್ನೈ ತಂಡವು ಗೆಲುವಿನ ಹಾದಿಗೆ ಮರಳಲು ತವಕಿಸುತ್ತಿದೆ. ತಂಡದ ನಿಕಟಪೂರ್ವ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಋತುರಾಜ್ಗೆ ನೀಡುವ ಸಲಹೆಗಳು ಇಲ್ಲಿ ಮುಖ್ಯವಾದವು.
ಕಳೆದೆರಡು ಪಂದ್ಯಗಳಲ್ಲಿ ಆಲ್ರೌಂಡರ್ ಸುನಿಲ್ ನಾರಾಯಣ, ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ಯುವಪ್ರತಿಭೆ ಅಂಗಕ್ರಿಷ್ ರಘುವಂಶಿ ಕಳೆದ ಪಂದ್ಯಗಳಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ್ದರು. ಆದರೆ ಈ ಪಂದ್ಯದಲ್ಲಿ ಯಾವೊಬ್ಬ ಆಟಗಾರರೂ ಮಿಂಚಲಿಲ್ಲ.
ಇತ್ತೀಚಿನ ಮಾಹಿತಿ ಪ್ರಕಾರ ಸಿಎಸ್ಕೆ ತಂಡ 2 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೇ 10 ರನ್ ಗಳಿಸಿತ್ತು.