ಬೆಂಗಳೂರು: ಕಲಿಕೇಶ್ ನಾರಾಯಣಸಿಂಗ್ ದೇವ್ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್ಎಐ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹಿರಿಯ ಉಪಾಧ್ಯಕ್ಷರಾಗಿದ್ದ ದೇವ್ ಅವರು ನಿಕಟಪೂರ್ವ ಅಧ್ಯಕ್ಷ ರಣಿಂದರ್ ಸಿಂಗ್ ಅವರು ‘ದೀರ್ಘ ರಜೆ’ಗೆ ತೆರಳಿದ್ದರಿಂದ ಖಾಲಿಯಾಗಿರುವ ಸ್ಥಾನಕ್ಕೇರಿದ್ದಾರೆ.
ನೂತನ ರಾಷ್ಟ್ರೀಯ ಕ್ರೀಡಾ ನೀತಿಯ ಪ್ರಕಾರ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳ (ಎನ್ಎಸ್ಎಫ್) ಪದಾಧಿಕಾರಿಗಳು 12 ವರ್ಷಗಳಿಗಿಂತಲೂ ಹೆಚ್ಚು ಅಧಿಕಾರ ನಡೆಸುವಂತಿಲ್ಲ.
ರಣೀಂದರ್ ಅವರು 2021ರಲ್ಲಿ ಮರುಆಯ್ಕೆ ಆಗಿದ್ದರು. ಆದರೆ 2010 ರಿಂದ 2022ರವರೆಗೆ ಅವರು ಕಾರ್ಯನಿರ್ವಹಿಸಿದ್ದರಿಂದ ಈ ವರ್ಷ ಅವರು ಸ್ಥಾನ ಬಿಡಬೇಕಿತ್ತು. ಆದ್ದರಿಂದ ‘ಸುದೀರ್ಘ ರಜೆ’ ತೆಗೆದುಕೊಂಡಿದ್ದಾರೆ.
‘ಗುರುವಾರ ನಡೆದ ವರ್ಚುವಲ್ ಸಭೆಯಲ್ಲಿ ಸಿಂಗ್ ದೇವ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ’ ಎಂದು ಎನ್ಆರ್ಎಐ ಪ್ರಕಟಣೆಯಲ್ಲಿ ತಿಳಿಸಿದೆ.
‘ನಾನು ಹೊಣೆಯನ್ನು ಸ್ವೀಕರಿಸುತ್ತಿದ್ದೇನೆ. ಆಡಳಿತ ಸಮಿತಿಯು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಕಾರ್ಯನಿರ್ವಹಿಸುವೆ. ಮುಂಬರುವ ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಷಿಪ್ಗಳಿಗಾಗಿ ಸಿದ್ಧತೆಗಳನ್ನು ನಡೆಸಲು ಗಮನ ನೀಡುತ್ತೇನೆ’ ಎಂದು ಸಿಂಗ್ ದೇವ್ ಹೇಳಿದ್ದಾರೆ.