ಮೆಲ್ಬರ್ನ್: ‘ಸದ್ಯ ಈ ವಿಶ್ವಕಪ್ ಟೂರ್ನಿಯ ಮೇಲೆ ಸಂಪೂರ್ಣ ಚಿತ್ತ ನೆಟ್ಟಿದ್ದೇವೆ. ಮುಂದೆ ಆಗುವ, ಹೋಗುವ ವಿಷಯಗಳ ಬಗ್ಗೆ ಯೋಚಿಸುತ್ತಿಲ್ಲ’–
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಮಾತುಗಳಿವು. ಭಾರತ ತಂಡವು ಮುಂದಿನ ವರ್ಷ ಏಷ್ಯಾ ಕಪ್ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲವೆಂದು ಈಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ನೀಡಿರುವುದರ ಕುರಿತು ರೋಹಿತ್ ನೀಡಿದ ಪ್ರತಿಕ್ರಿಯೆ ಇದು.
‘ಆ ವಿಷಯಗಳ ಕುರಿತು ಬಿಸಿಸಿಐ ನಿರ್ಧಾರ ಕೈಗೊಳ್ಳುವುದು. ನಾಳೆ (ಭಾನುವಾರ)ಯ ಪಂದ್ಯದ ಬಗ್ಗೆ ಹೇಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಮಾತ್ರ ನಾವು ಯೋಚಿಸುತ್ತಿದ್ದೇವೆ. ಉತ್ತಮವಾಗಿ ಆಡುವುದರ ಮೇಲೆ ನಮ್ಮ ಗಮನ’ ಎಂದು ಹೇಳಿದರು.
‘ಟಿ20 ವಿಶ್ವಕಪ್ ಜಯಿಸಿ 15 ವರ್ಷಗಳ ಕಳೆದಿವೆ. 2011ರ ಏಕದಿನ ವಿಶ್ವಕಪ್ ಜಯದ ನಂತರ ಭಾರತವು ಯಾವ ವಿಭಾಗದಲ್ಲಿಯೂ ಕಪ್ ಜಯಿಸಿಲ್ಲ. ಈ ಪ್ರಶಸ್ತಿ ಬರವನ್ನು ನೀಗಿಸುವ ಛಲ ತಂಡದ ಎಲ್ಲ ಆಟಗಾರರಲ್ಲೂ ಇದೆ. ಅದಕ್ಕಾಗಿ ಅಗತ್ಯವಿರುವ ಎಲ್ಲ ಶ್ರಮವನ್ನೂ ವಿನಿಯೋಗಿಸುತ್ತಿದ್ದೇವೆ’ ಎಂದರು.