ಮುಂಬೈ: ‘ಈ ವರ್ಷ ಟ್ವೆಂಟಿ–20 ವಿಶ್ವಕಪ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆದರೆ, ಎರಡು ಟೂರ್ನಿಗಳಲ್ಲೂ ಕಣಕ್ಕಿಳಿಯುತ್ತೇನೆ’..
‘ಐಪಿಎಲ್ ಮತ್ತು ವಿಶ್ವಕಪ್’ ಇವೆರಡರಲ್ಲಿ ನೀವು ಯಾವ ಟೂರ್ನಿಯಲ್ಲಿ ಆಡಲು ಇಷ್ಟಪಡುತ್ತೀರಿ ಎಂದು ಅಭಿಮಾನಿಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಕೇಳಿದ ಪ್ರಶ್ನೆಗೆ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ನೀಡಿದ ಉತ್ತರವಿದು.
ಭಾನುವಾರ ನಡೆದ ‘ಲೆಟ್ಸ್ ಹ್ಯಾವ್ ಚಾಟಿ ಸಂಡೇ’ ಸಂವಾದದಲ್ಲಿ ರೋಹಿತ್ ಅವರು ಅಭಿಮಾನಿಗಳ ಜೊತೆ ಹರಟಿದ್ದಾರೆ.
ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಕರಗಿಸುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ‘ಭಾರತದ ಹಿರಿಯ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಕೇಳಿದರೆ ಒಳಿತು’ ಎಂದು ಅಭಿಮಾನಿಯೊಬ್ಬರಿಗೆ ಸಲಹೆ ನೀಡಿದ್ದಾರೆ.
ಲಾಕ್ಡೌನ್ ನಂತರದ ಯೋಜನೆಯ ಕುರಿತ ಪ್ರಶ್ನೆಗೆ ‘ಮತ್ತೆ ಮೈದಾನಕ್ಕಿಳಿದು ಚೆಂಡನ್ನು ಸಿಕ್ಸರ್ಗೆ ಅಟ್ಟುವುದು’ ಎಂದಿದ್ದಾರೆ.
‘ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಇಂಗ್ಲೆಂಡ್ನ ಜೇಸನ್ ರಾಯ್ ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಬಿಡುವಿನ ವೇಳೆಯಲ್ಲಿ ಮಗಳದೊಂದಿಗೆ ಆಟ ಆಡಲು ಇಷ್ಟಪಡುತ್ತೇನೆ. ಆಹಾರದ ವಿಚಾರಕ್ಕೆ ಬಂದರೆ ನನಗೆ ಅವಲಕ್ಕಿ ಎಂದರೆ ನನಗೆ ಪಂಚಪ್ರಾಣ’ ಎಂದೂ ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್, ಇವರಲ್ಲಿ ನಿಮ್ಮ ಆಯ್ಕೆ ಯಾರು ಎಂಬ ಪ್ರಶ್ನೆಗೆ ‘ಇಬ್ಬರಿಂದಲೂ ನನಗೆ ಒದೆ ತಿನ್ನಿಸಬೇಕೆಂದುಕೊಂಡಿದ್ದಿರೇನು’ ಎಂದು ಹಾಸ್ಯದ ಧಾಟಿಯಲ್ಲಿ ಅಭಿಮಾನಿಯನ್ನೇ ಪ್ರಶ್ನಿಸಿದ್ದಾರೆ.
‘ಈಗಲಾದರೂ ಹೋಗಿ ಹೇರ್ ಕಟ್ ಮಾಡಿಸಿಕೊಳ್ಳಿ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ಗೆ ಸಲಹೆ ನೀಡಿರುವ ರೋಹಿತ್ ಅವರು ಮಹೇಂದ್ರ ಸಿಂಗ್ ಧೋನಿ, ದಿಗ್ಗಜ ಆಟಗಾರ ಎಂದು ನುಡಿದಿದ್ದಾರೆ.