ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ತಮಿಳುನಾಡು ವಿರುದ್ಧ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ಆಡಲಿರುವ ಮುಂಬೈ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮಾರ್ಚ್ 2ರಿಂದ ನಡೆಯುವ ಈ ಪಂದ್ಯಕ್ಕೆ ಮಂಗಳವಾರ 16 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.
41 ಬಾರಿಯ ಚಾಂಪಿಯನ್ ಮುಂಬೈ ಬಿಕೆಸಿ ಮೈದಾನದಲ್ಲಿ ಮಂಗಳವಾರ ಮುಕ್ತಾಯಗೊಂಡ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬರೋಡಾ ತಂಡದ ಎದುರು ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಉಪಾಂತ್ಯಕ್ಕೆ ಮುನ್ನಡೆದಿತ್ತು.
ದೊಡ್ಡ ಇನಿಂಗ್ಸ್ ಆಡಲು ವಿಫಲರಾಗುತ್ತಿರುವ ಮತ್ತು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿರಲಿಲ್ಲ. ಅಯ್ಯರ್ ಮತ್ತು ಗಾಯಾಳು ಶಿವಂ ದುಬೆ, ಬರೋಡ ವಿರುದ್ಧ ಕ್ವಾರ್ಟರ್ಫೈನಲ್ ಪಂದ್ಯ ಆಡಿರಲಿಲ್ಲ.
ಟೆಸ್ಟ್ ತಂಡಕ್ಕೆ ಮರಳಬೇಕಾದರೆ ಅಂತಹ ಆಟಗಾರರು ರಣಜಿ ಟ್ರೋಫಿ ಪಂದ್ಯದಲ್ಲಿ ಆಡಬೇಕು. ಈ ಸಂಬಂಧ ನಿರ್ದೇಶ ಹೊರಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಜಯ್ ಶಾ ಹೇಳಿದ್ದರು. ಅಯ್ಯರ್ ಬೆನ್ನುನೋವಿನ ಸಮಸ್ಯೆಯಿಂದ ಗುಣಮುಖರಾಗಿದ್ದಾರೆ.