ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ವಲಯ ತಂಡ 213 ರನ್ ಗಳಿಸಿ ಆಲೌಟ್ ಆಗಿದೆ.
ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಆದರೆ, ದಕ್ಷಿಣ ವಲಯ ಬ್ಯಾಟರ್ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ವಿಫಲರಾದರು. ನಾಯಕ ಹನುಮ ವಿಹಾರಿ (63) ಹೊರತುಪಡಿಸಿ ಉಳಿದವರಿಂದ ಉತ್ತಮ ಆಟ ಮೂಡಿಬರಲಿಲ್ಲ. ಹೀಗಾಗಿ ಮೊದಲ ದಿನದಾಟದ ಅಂತ್ಯಕ್ಕೆ 65 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 182 ರನ್ ಕಲೆಹಾಕಿದ್ದ ದಕ್ಷಿಣ ವಲಯ, ಆ ಮೊತ್ತಕ್ಕೆ 21 ರನ್ ಕೂಡಿಸುವಷ್ಟರಲ್ಲಿ ಸರ್ವಪತನ ಕಂಡಿದೆ.
ಪಶ್ಚಿಮ ವಲಯ ಪರ ಸ್ಯಾಮ್ಸ್ ಮುಲಾನಿ ಮೂರು ವಿಕೆಟ್ ಪಡೆದರೆ, ಅರ್ಜನ್ ನಾಗಸವಾಲಾ, ಚಿಂತನ್ ಗಜ ಮತ್ತು ಧರ್ಮೇಂದ್ರಸಿನ್ಹಾ ಜಡೇಜ ತಲಾ ಎರಡು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಅಜಿತ್ ಶೇಠ್ ಪಾಲಾಯಿತು.
ಸಾಧಾರಣ ಮೊತ್ತದೆದುರು ಇನಿಂಗ್ಸ್ ಆರಂಭಿಸಿರುವ ಪಾಂಚಾಲ್ ಪಡೆ 1 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ. ನಾಯಕ ಪಾಂಚಾಲ್ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪೃಥ್ವಿ ಶಾ (43) ಮತ್ತು ಹಾರ್ವಿಕ್ ದೇಸಾಯಿ (11) ಕ್ರೀಸ್ನಲ್ಲಿದ್ದಾರೆ.