ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಸ್ಪಿನ್ನರ್‌ ಸ್ಥಾನಕ್ಕೆ ವರುಣ್–ರಾಹುಲ್ ಸ್ಪರ್ಧೆ?

ಟಿ20 ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ: ಶೀಘ್ರದಲ್ಲೇ ಆಯ್ಕೆ ಸಮಿತಿಯ ಸಭೆ
Last Updated 6 ಸೆಪ್ಟೆಂಬರ್ 2021, 14:07 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆಯಾಗಿ ಮುಖ್ಯಸ್ಥ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರುವ ಸಾಧ್ಯತೆಯಿದೆ. ತಂಡದಲ್ಲಿ ಹೆಚ್ಚುವರಿ ಸ್ಪಿನ್ನರ್‌ ಸ್ಥಾನ ಪಡೆಯಲು ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಾಹರ್‌ ಮಧ್ಯೆ ಪೈಪೋಟಿ ನಡೆಯಲಿದೆ.

ಆಯ್ಕೆ ಸಮಿತಿಯು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ಕಚೇರಿ ಇರುವ ಮುಂಬೈನಲ್ಲಿ ಸಭೆ ಸೇರಲಿದ್ದು, ಮ್ಯಾಂಚೆಸ್ಟರ್‌ನಲ್ಲಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಲಂಡನ್‌ನಲ್ಲಿರುವ ಕೋಚ್ ರವಿ ಶಾಸ್ತ್ರಿ ಅವರನ್ನು ಮಂಗಳವಾರ ಅಥವಾ ಬುಧವಾರ ಸಂಪರ್ಕಿಸುವ ನಿರೀಕ್ಷೆಯಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ (ಆಯ್ಕೆ ಸಮಿತಿಯ ಸಂಚಾಲಕ) ಅವರು ಆಯ್ಕೆ ಸಮಿತಿಯ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಹೆಚ್ಚಿನ ತಂಡಗಳು 15 ಸದಸ್ಯರ ತಂಡಗಳನ್ನು ಪ್ರಕಟಿಸುತ್ತಿವೆ. ಆದರೆ ಬಿಸಿಸಿಐ 18 ಅಥವಾ 20 ಸದಸ್ಯರ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಏಕೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕೋವಿಡ್‌ ಕಾರಣದಿಂದಾಗಿ, 30 ಮಂದಿಯ ತಂಡವನ್ನು ಕೊಂಡೊಯ್ಯಲು ಅವಕಾಶ ನೀಡಿದೆ. ಈ ಸಂಖ್ಯೆಯು ನೆರವು ಸಿಬ್ಬಂದಿಯನ್ನೂ ಒಳಗೊಂಡಿದೆ. ಈ ಹಿಂದಿನ ಆವೃತ್ತಿಗಳಿಗೆ 23 ಮಂದಿಯ ತಂಡಕ್ಕೆ ಮಾತ್ರ ಅವಕಾಶವಿತ್ತು.

ಇಬ್ಬರು ಸ್ಪಿನ್ನರ್‌ಗಳಾಗಿ ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜ ಸ್ಥಾನ ಪಡೆಯುವುದು ಬಹುತೇಕ ಖಚಿತ. ಆದರೆ ಮೂರನೇ ಸ್ಥಾನಕ್ಕಾಗಿ ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ಚಕ್ರವರ್ತಿ ಮತ್ತು ಇತ್ತೀಚಿಗೆ ಲಂಕಾ ಪ್ರವಾಸದಲ್ಲಿ ಮಿಂಚಿರುವ ರಾಹುಲ್ ಮಧ್ಯೆ ಸ್ಪರ್ಧೆಯ ನಿರೀಕ್ಷೆಯಿದೆ.

ರೋಹಿತ್ ಶರ್ಮಾ–ಕೆ.ಎಲ್‌.ರಾಹುಲ್ ಬಳಿಕದ ಹೆಚ್ಚುವರಿ ಆರಂಭಿಕರ ಸ್ಥಾನಕ್ಕೆ ಶಿಖರ್ ಧವನ್ ಮತ್ತು ಪೃಥ್ವಿ ಶಾ ಮಧ್ಯೆ ಪೈಪೋಟಿ ನಡೆಯಬಹುದು. ಆದರೆ 20 ಜನರ ತಂಡ ಪ್ರಕಟಿಸಿದರೆ ಇಬ್ಬರೂ ಸ್ಥಾನ ಗಳಿಸಬಹುದು. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್ ಶಮಿ (ಫಿಟ್‌ನೆಸ್ ಅವಲಂಬಿಸಿ) ಆಯ್ಕೆಯಾಗಬಹುದು. ದೀಪಕ್ ಚಾಹರ್ ಮತ್ತು ಮೊಹಮ್ಮದ್ ಸಿರಾಜ್‌ ಮಧ್ಯೆ ಸ್ಪರ್ಧೆ ನಡೆಯಬಹುದು.

ಭಾರತದ ಸಂಭಾವ್ಯ ತಂಡ (14 ಮಂದಿ): ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್ ಯಾದವ್‌, ಶ್ರೇಯಸ್ ಅಯ್ಯರ್‌, ರಿಷಭ್ ಪಂತ್‌ (ವಿಕೆಟ್‌ ಕೀಪರ್‌), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್‌, ದೀಪಕ್ ಚಾಹರ್‌, ಮೊಹಮ್ಮದ್‌ ಶಮಿ ಮತ್ತು ಶಾರ್ದೂಲ್ ಠಾಕೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT