ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಫೈನಲ್ ಇಂದು: ಮತ್ತೊಂದು ಪ್ರಶಸ್ತಿಯ ತವಕ

ಚೊಚ್ಚಲ ಪ್ರಶಸ್ತಿ ಮೇಲೆ ಬಾಂಗ್ಲಾ ಕಣ್ಣು
Last Updated 8 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಪೊಷೆಸ್ಟ್ರೂಮ್, ದಕ್ಷಿಣ ಆಫ್ರಿಕಾ: ಪ್ರಿಯಂ ಗರ್ಗ್ ನಾಯಕತ್ವದ ಭಾರತ 19ವರ್ಷದೊಳಗಿನವರ ತಂಡವು ಸತತ ಎರಡನೇ ಬಾರಿ ಪ್ರಶಸ್ತಿ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದೆ.

ಇದೇ ಮೊದಲ ಸಲ ಫೈನಲ್ ತಲುಪಿರುವ ಬಾಂಗ್ಲಾ ತಂಡವನ್ನು ಭಾರತದ ಪಡೆಯು ಎದುರಿಸಲಿದೆ. ಏಷ್ಯಾ ಖಂಡದ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ವಿಶೇಷ.

2018ರಲ್ಲಿ ಪೃಥ್ವಿ ಶಾ, ಶುಭಮನ್ ಗಿಲ್ ಅವರಿದ್ದ ತಂಡವು ಪ್ರಶಸ್ತಿ ಗೆದ್ದಿತ್ತು. ಅವರಿಬ್ಬರೂ ಸದ್ಯ ಭಾರತ ರಾಷ್ಟ್ರೀಯ ತಂಡದಲ್ಲಿದ್ದಾರೆ.

ಈ ಬಾರಿ ಫೈನಲ್ ಗೆ ತಂಡವು ಲಗ್ಗೆ ಹಾಕಲು ಮುಂಬೈ ಹುಡುಗ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಮಧ್ಯಮವೇಗಿ ಕಾರ್ತಿಕ್ ತ್ಯಾಗಿ ಕಾರಣರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಎದುರು ಯಶಸ್ವಿ ಶತಕ ಬಾರಿಸಿದ್ದರು. ತಂಡವು 10 ವಿಕೆಟ್‌ಗಳಿಂದ ಜಯಿಸಿತ್ತು. 2000ನೇ ಇಸವಿಯಲ್ಲಿ ಭಾರತವು ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಸಲ ಚಾಂಪಿಯನ್ ಆಗಿತ್ತು. ಎರಡು ಬಾರಿ ರನ್ನರ್ಸ್ ಅಪ್ ಆಗಿದೆ. ಫೈನಲ್‌ಗೆರಿರುವುದು ಇದು ಏಳನೇ ಸಲ.

‘ಈ ವಯೋಮಿತಿ ವಿಭಾಗದಲ್ಲಿ ವಿಶ್ವಕಪ್ ಟೂರ್ನಿ ಆಡಿದ ಬಹಳಷ್ಟು ಆಟಗಾರರು ಭಾರತ ರಾಷ್ಟ್ರೀಯ ತಂಡ ದಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಬಹುತೇಕರು ಅಲ್ಲಿಯೂ ಯಶಸ್ವಿಯಾಗಿದ್ದಾರೆ. ಅದೇ ಈಗಿನ ಆಟಗಾರರಿಗೂ ಸ್ಫೂರ್ತಿ. ಅದಕ್ಕಾಗಿಯೇ ತಂಡ ದಲ್ಲಿರುವ ಎಲ್ಲ ಆಟಗಾರರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ತುದಿ ಗಾಲಿನಲ್ಲಿ ನಿಂತಿದ್ದಾರೆ’ ಎಂದು ತಂಡದ ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ ಹೇಳಿದರು.

ಬಾಂಗ್ಲಾ ತಂಡವೂ ಚೊಚ್ಚಲ ಪ್ರಶಸ್ತಿ ಜಯದ ಕನಸು ಕಾಣುತ್ತಿದೆ. ಸೆಮಿಫೈನಲ್‌ನಲ್ಲಿ ತಂಡದ ಮೆಹಮುದುಲ್ಲಾ ಹಸನ್ ಜಾಯ್ ಅವರು ನ್ಯೂಜಿಲೆಂಡ್ ವಿರುದ್ಧ ಶತಕ ಗಳಿಸಿದ್ದರು. ಅಲ್ಲದೇ ಬೌಲರ್‌ಗಳೂ ಉತ್ತಮ ಸಾಧನೆ ಮಾಡಿದ್ದರು. ಆದ್ದರಿಂದ ಭಾರತದ ಬಳಗವನ್ನು ಎದುರಿಸುವ ಹುಮ್ಮಸ್ಸಿನಲ್ಲಿದೆ.

ತಂಡಗಳು ಇಂತಿವೆ

ಭಾರತ (19 ವರ್ಷ): ಪ್ರಿಯಂ ಗರ್ಗ್ (ನಾಯಕ), ಧ್ರುವ ಜುರೇಲ್ (ವಿಕೆಟ್‌ಕೀಪರ್), ಯಶಸ್ವಿ ಜೈಸ್ವಾಲ್, ದಿವ್ಯಾಂಶ್ ಸಕ್ಸೆನಾ, ತಿಲಕ್ ವರ್ಮಾ, ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ಣೋಯಿ, ಶಾಶ್ವತ್ ರಾವತ್, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ ಪಾಟೀಲ, ಶುಭಾಂಗ ಹೆಗ್ಡೆ, ಸುಶಾಂತ್ ಮಿಶ್ರಾ, ಕುಮಾರ್ ಕುಶಾಗ್ರ.

ಬಾಂಗ್ಲಾದೇಶ (19 ವರ್ಷ); ಅಕ್ಬರ್ ಅಲಿ (ನಾಯಕ–ವಿಕೆಟ್‌ಕೀಪರ್), ಪರ್ವೇಜ್ ಹುಸೇನ್ ಎಮೊನ್, ತನ್ಜೀದ್ ಹಸನ್, ಮೆಹಮುದ್ ಅಲ್ ಹಸನ್ ಜಾಯ್, ತೌಹಿದ್ ಹೃದಯ್, ಶಹಾದತ್ ಹುಸೇನ್, ಶಮಿಮ್ ಹುಸೇನ್, ರಕೀಬುಲ್ ಹಸನ್, ಶರೀಫುಲ್ ಇಸ್ಲಾಂ, ತಂಜೀಮ್ ಹಸನ್ ಶಕೀಬ್, ಹಸನ್ ಮುರಾದ್, ಮೃತ್ಯುಂಜಯ್ ಚೌಧರಿ, ಅಭಿಷೇಕ್ ದಾಸ್, ಪ್ರತೀಕ್ ನವರೋಸ್ ನಬಿಲ್, ಶಾಹಿನ್ ಆಲಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT