ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯುರಾಂಡ್‌ ಕಪ್‌: ‘ಡ್ರಾ’ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ

ಆರ್ಮಿ ರೆಡ್‌ ವಿರುದ್ಧದ ಪಂದ್ಯ
Last Updated 5 ಆಗಸ್ಟ್ 2019, 18:54 IST
ಅಕ್ಷರ ಗಾತ್ರ

ಕೋಲ್ಕತ್ತ: ಬೆಂಗಳೂರು ಎಫ್‌ಸಿ ತಂಡದ ಹೊಸ ಆಟಗಾರ ಸುರೇಶ್‌ ವಾಂಗ್ಜಾಮ್‌ 81ನೇ ನಿಮಿಷ ‘ಪೆನಾಲ್ಟಿ’ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ತಮ್ಮ ತಂಡ ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಆರ್ಮಿ ರೆಡ್‌ ವಿರುದ್ಧದ ಪಂದ್ಯವನ್ನು 1–1 ಗೋಲುಗಳಿಂದ ‘ಡ್ರಾ’ ಮಾಡಿಕೊಳ್ಳಲು ನೆರವಾದರು.

‌ಸೋಮವಾರ ಧಗೆಯ ವಾತಾವರಣವಿದ್ದು, ಸೂಪರ್‌ ಲೀಗ್‌ ಚಾಂಪಿಯನ್ನರಾದ ಬೆಂಗಳೂರು ಎಫ್‌ಸಿ ಇದಕ್ಕೆ ಹೊಂದಿಕೊಳ್ಳಲು ಪರದಾಡಿತು. ಕೆಲವು ಅವಕಾಶಗಳನ್ನು ವ್ಯರ್ಥಪಡಿಸಿಕೊಂಡಿತು ಕೂಡ.

ಆರ್ಮಿ ತಂಡದ ಫಾರ್ವರ್ಡ್‌ ಆಟಗಾರ ಲಿಟೊನ್‌ ಶಿಲ್‌, ವಿರಾಮಕ್ಕೆ ಕೆಲವೇ ಸೆಕೆಂಡುಗಳಿರುವಾಗ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಉತ್ತಮ ಪಾಸ್‌ಗಳನ್ನು ಕಂಡ ಮೊದಲಾರ್ಧದ ಹೆಚ್ಚಿನ ಅವಧಿಯಲ್ಲಿ ಬೆಂಗಳೂರು ಎಫ್‌ಸಿ ಮೇಲುಗೈ ಸಾಧಿಸಿತ್ತು.

ಪಂದ್ಯ ಮುಗಿಯಲು 9 ನಿಮಿಷಗಳಿರುವಂತೆ, ರಕ್ಷಣೆ ಆಟಗಾರ ನಾಮ್‌ಗ್ಯಾಲ್‌ ಅವರನ್ನು ಎದುರಾಳಿ ತಂಡದ ಬದಲಿ ಆಟಗಾರ ಆಲ್ವಿನ್‌ ಇ. ಅವರುಗೋಲಿನ ಹತ್ತಿರ ಕೆಡವಿ ಬೀಳಿಸಿದ ಪರಿಣಾಮ ಬೆಂಗಳೂರು ಎಫ್‌ಸಿಗೆ ‘ಪೆನಾಲ್ಟಿ’ ಅವಕಾಶ ದೊರೆಯಿತು. ಬೆಂಗಳೂರು ತಂಡಕ್ಕೆ ಮೊದಲ ಬಾರಿ ಆಡಿದ ಸುರೇಶ್‌, ಸಂಯಮದಿಂದ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಈ ‘ಡ್ರಾ’ದಿಂದ ಒಂದು ಪಾಯಿಂಟ್‌ ಪಡೆದ ಬೆಂಗಳೂರು ಎಫ್‌ಸಿ ತಂಡ ಈಗ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈಸ್ಟ್‌ ಬೆಂಗಾಲ್‌ (3 ಪಾಯಿಂಟ್‌) ಮೊದಲ ಸ್ಥಾನದಲ್ಲಿದೆ. ಆರ್ಮಿ ರೆಡ್‌ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನ ತಂಡ, ಆಗಸ್ಟ್‌ 14ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ವಿರುದ್ಧ ಆಡಲಿದೆ. ಇದು ಒಂದು ರೀತಿ ‘ಮಾಡು– ಮಡಿ’ ಪಂದ್ಯವಾಗಿ ಪರಿಣಮಿಸಿದೆ.

‘ಇದು ನನಗೆ ಮೊದಲ ಪಂದ್ಯ. ಗೋಲು ಗಳಿಸಿದ್ದರಿಂದ ಸಂತಸವಾಗಿದೆ. ಆದರೆ ತಂಡ ಜಯಗಳಿಸಿದ್ದರೆ ತುಂಬಾ ಖುಷಿಯಾಗುತಿತ್ತು’ ಎಂದು ಎಐಎಫ್‌ಎಫ್‌ ಅಕಾಡೆಮಿಯಿಂದ ತಯಾರಾಗಿದ್ದ ಮಣಿಪುರದ ಸುರೇಶ್‌ ಪ್ರತಿಕ್ರಿಯಿಸಿದರು.

‘ಬೆಂಗಳೂರಿನಲ್ಲಿ ತಂಪಾದ ವಾತಾವರಣವಿದೆ. ಇಲ್ಲಿ ತಾಪಮಾನ ಹೆಚ್ಚು ಇದ್ದು, ಸೆಕೆ ವಿಪರೀತ. ನಾವು ನೆಪ ಹೇಳುವುದಿಲ್ಲ. ಮುಂದಿನ ಪಂದ್ಯ ಗೆಲ್ಲಲು ಪೂರ್ಣ ಸಾಮರ್ಥ್ಯ ಬಳಸಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT