ಬ್ಯಾಂಬೊಲಿಮ್: ಬೆಂಗಳೂರು ಎಫ್ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬುಧವಾರ ಚೆನ್ನೈಯಿನ್ ಎಫ್ಸಿ ಸವಾಲು ಎದುರಿಸಲಿದೆ.
ಈ ಆವೃತ್ತಿಯಲ್ಲಿ ಮೊದಲ ಗೋಲು ದಾಖಲಿಸಿದ್ದ ನಾಯಕ ಸುನಿಲ್ ಚೆಟ್ರಿ ಆಟದ ನೆರವಿನಿಂದ ಬೆಂಗಳೂರು, ಕಳೆದ ಪಂದ್ಯದಲ್ಲಿ ಎಫ್ಸಿ ಗೋವಾ ಎದುರು ಡ್ರಾ ಸಾಧಿಸಿತ್ತು. ಈ ಪಂದ್ಯದಲ್ಲಿ ಗೆಲುವಿನ ಭರವಸೆಯಲ್ಲಿದೆ.
ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಚೆಟ್ರಿ ಪಡೆಯು ಈ ಹಣಾಹಣಿಯಲ್ಲಿ ಗೆದ್ದರೆ ಅಗ್ರ ನಾಲ್ಕರ ಪಟ್ಟಿಗೆ ಸಮೀಪಿಸಲಿದೆ. ಗೋಲಿನ ಬರ ನೀಗಿಸಿಕೊಂಡಿರುವ ಚೆಟ್ರಿ ಬಗ್ಗೆ ತಂಡದ ಕೋಚ್ ಮಾರ್ಕೊ ಪೆಜೌಲಿ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿದೆ.
‘ನಮ್ಮ ತಂಡಕ್ಕೆ ಕೆಲವೊಂದು ಸಮಸ್ಯೆಗಳಿವೆ. ಆಶಿಕ್ ಕುರುಣಿಯನ್ ಅವರು ಗಾಯಗೊಂಡಿದ್ದಾರೆ. ಕ್ಲೀಟನ್ ಸಿಲ್ವಾ ಆಡುವುದು ಅನುಮಾನ. ಗಾಯಗೊಂಡಿರುವ ರೊಂದು ಮುಸಾವು ಕಿಂಗ್ ಈ ಋತುವಿನ ಉಳಿದ ಟೂರ್ನಿಗಳಲ್ಲಿ ಕಣಕ್ಕಿಳಿಯುವುದು ಖಚಿತವಿಲ್ಲ‘ ಎಂದು ಪೆಜೌಲಿ ಹೇಳಿದ್ದಾರೆ.
ಚೆನ್ನೈಯಿನ್ 12 ಪಂದ್ಯಗಳಿಂದ 18 ಪಾಯಿಂಟ್ಸ್ ಕಲೆಹಾಕಿದ್ದು ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರುವ ಗುರಿ ಇಟ್ಟುಕೊಂಡಿದೆ.