ಚೆನ್ನೈ: ಯುವ ಚೆಸ್ ಪ್ರತಿಭೆ ಆದಿತ್ಯ ಎಸ್.ಸಾಮಂತ್ ಅವರು ಭಾರತದ 83ನೇ ಗ್ರ್ಯಾಂಡ್ಮಾಸ್ಟರ್ ಎನಿಸಿಕೊಂಡರು. ಮಹಾರಾಷ್ಟ್ರದ 17 ವರ್ಷದ ಅವರು ಸ್ವಿಟ್ಜರ್ಲೆಂಡ್ನಲ್ಲಿ ನಡೆಯುತ್ತಿರುವ ಬಿಯೆಲ್ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನ ಪಂದ್ಯ ಆಡುವ ಮೂಲಕ ಈ ಸಾಧನೆ ಮಾಡಿದರು.
ಆದಿತ್ಯ ಅವರು ಎಂಟನೇ ಸುತ್ತಿನಲ್ಲಿ ಚೀನಾದ ಬು ಕ್ಸಿಯಾಂಗ್ಝಿ ಜತೆ ಡ್ರಾ ಮಾಡಿಕೊಂಡಿದ್ದರು. ಮೂರನೇ ಜಿಎಂ ನಾರ್ಮ್ ಗಳಿಸಲು ಅವರು ಇನ್ನೊಂದು ಪಂದ್ಯ ಆಡಬೇಕಿತ್ತು. ಒಂಬತ್ತನೇ ಸುತ್ತಿನಲ್ಲಿ ಅವರು ಭಾರತದ ಆರ್ಯನ್ ಚೋಪ್ರಾ ಅವರನ್ನು ಎದುರಿಸಿದರು.
ಆದಿತ್ಯ, ಈ ಮೊದಲೇ 2,500 ಎಲೊ ಪಾಯಿಂಟ್ಸ್ ಹೊಂದಿದ್ದರಲ್ಲದೆ ಎರಡು ಜಿಎಂ ನಾರ್ಮ್ಗಳನ್ನು ಗಳಿಸಿದ್ದರು. ಚೆಸ್ನಲ್ಲಿ ಗ್ರ್ಯಾಂಡ್ಮಾಸ್ಟರ್ ಪಟ್ಟ ಲಭಿಸಬೇಕಾದರೆ, ಮೂರು ಜಿಎಂ ನಾರ್ಮ್ಗಳನ್ನು ಪಡೆಯುವ ಜತೆಯಲ್ಲೇ 2,500 ಎಲೊ ಪಾಯಿಂಟ್ಸ್ ಹೊಂದಬೇಕು.
ಕಳೆದ ವರ್ಷದ ಆಗಸ್ಟ್ನಲ್ಲಿ ಅಬುಧಾಬಿ ಮಾಸ್ಟರ್ಸ್ ಟೂರ್ನಿಯಲ್ಲಿ ಮೊದಲ ಜಿಎಂ ನಾರ್ಮ್ ಹಾಗೂ ಡಿಸೆಂಬರ್ನಲ್ಲಿ ನಡೆದಿದ್ದ ಎಲ್ ಲೊಬ್ರೆಗಟ್ ಓಪನ್ ಟೂರ್ನಿಯಲ್ಲಿ ಎರಡನೇ ನಾರ್ಮ್ ಪಡೆದುಕೊಂಡಿದ್ದರು.