ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪುರುಷರ ತಂಡದವರು ತುಮಕೂರಿನ ಕ್ರಿಯೇಟಿವ್ ಈಗಲ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಭಾನುವಾರ ನಡೆದ ಫೈನಲ್ನಲ್ಲಿ ಆಳ್ವಾಸ್ ತಂಡ 35–26, 35–29 ನೇರ ಸೆಟ್ಗಳಿಂದ ಬೆಂಗಳೂರಿನ ಕೆನರಾ ಬ್ಯಾಂಕ್ ತಂಡವನ್ನು ಸೋಲಿಸಿತು.
ಪಂದ್ಯದ ಎರಡು ಸೆಟ್ಗಳಲ್ಲೂ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ರೋಚಕ ಘಟ್ಟದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ಆಳ್ವಾಸ್ ತಂಡದವರು ಗೆಲುವಿನ ತೋರಣ ಕಟ್ಟಿದರು.
ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಎದುರೂ, ಕೆನರಾ ಬ್ಯಾಂಕ್ ತಂಡ ಬನಶಂಕರಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧವೂ ಗೆದ್ದಿದ್ದವು.
ರಾಜ್ಯದ ವಿವಿಧ ಭಾಗಗಳ ಒಟ್ಟು 15 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.