ಬೆಂಗಳೂರು: ನಾಯಕ ಮನ್ಪ್ರೀತ್ ಸಿಂಗ್ ಸೇರಿದಂತೆ ಕೋವಿಡ್–19 ಸೋಂಕಿನಿಂದ ಬಳಲುತ್ತಿದ್ದ ಭಾರತ ಹಾಕಿ ತಂಡದ ಆರು ಆಟಗಾರರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿರುವ ಆಸ್ಪತ್ರೆಯಿಂದ ಸೋಮವಾರ ಸಂಜೆಅವರು ಬಿಡುಗಡೆಯಾಗುವರು ಎಂದು ಮೂಲಗಳು ತಿಳಿಸಿವೆ.
ಮನ್ಪ್ರೀತ್, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರನ್ ಸಿಂಗ್, ವರುಣ್ ಕುಮಾರ್, ಗೋಲ್ಕೀಪರ್ ಕೃಷ್ಣಬಹಾದ್ದೂರ್ ಪಾಠಕ್ ಹಾಗೂ ಮನ್ದೀಪ್ ಸಿಂಗ್ ಅವರು ಸದ್ಯ ಎರಡು ಬಾರಿ ಕೋವಿಡ್ ತಪಾಸಣೆಗೆ ಒಳಗಾಗಿದ್ದು, ವರದಿ ನೆಗೆಟಿವ್ ಬಂದಿದ್ದು, ಆರೋಗ್ಯವಾಗಿದ್ದಾರೆ.
ಆಗಸ್ಟ್ 10–12ರಂದು ನಡೆಸಿದ ಪರೀಕ್ಷೆಯಲ್ಲಿ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಮನ್ದೀಪ್ ಅವರ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕುಸಿದಿತ್ತು. ಹೀಗಾಗಿಅವರನ್ನು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಅಧಿಕಾರಿಗಳು ಬೆಂಗಳೂರಿನ ಎಸ್ಎಸ್ ಸ್ಪರ್ಶ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮನ್ಪ್ರೀತ್ ಹಾಗೂ ಇತರ ನಾಲ್ವರು ಆಟಗಾರರನ್ನೂ ಮುನ್ನೆಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ತರಬೇತಿ ಶಿಬಿರಗಳು ಬುಧವಾರದಿಂದ ಆರಂಭವಾಗಲಿವೆ.
ಸೋಂಕಿನಿಂದ ಗುಣಮುಖರಾದ ಆರು ಆಟಗಾರರು ಇನ್ನಷ್ಟು ದಿನ ತಂಡದಿಂದ ಪ್ರತ್ಯೇಕವಾಗಿ ಇರಬೇಕಾಗಿದೆ.
ಸದ್ಯ 33 ಪುರುಷ ಹಾಗೂ 24 ಮಹಿಳಾ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿದ್ದಾರೆ.ಈ ಅಲ್ಪ ಅವಧಿಯ ಶಿಬಿರವುಸೆಪ್ಟೆಂಬರ್ 30ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.
‘ಸರ್ಕಾರದ ಕೋವಿಡ್ ಪ್ರಸರಣ ತಡೆ ಮಾರ್ಗಸೂಚಿಗಳ ಅನ್ವಯ, ಸೋಂಕಿನಿಂದ ಗುಣಮುಖರಾದ ಆಟಗಾರರು ಸಾಯ್ ಆವರಣದೊಳಗೇ ಒಂದು ವಾರ ಅಥವಾ 10 ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರಬೇಕಾಗುತ್ತದೆ‘ ಎಂದು ಮೂಲಗಳು ತಿಳಿಸಿವೆ.
ಎಲ್ಲ ಆಟಗಾರ್ತಿಯರ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ.