ಜಲಂಧರ್: ಬರ್ಮಿಂಗ್ಹ್ಯಾಂ ಕಾಮನ್ವೆಲ್ತ್ ಕೂಟದ ಚಿನ್ನದ ಪದಕ ವಿಜೇತರಾದ ಶರತ್ ಕಮಲ್ ಮತ್ತು ಮಣಿಕಾ ಬಾತ್ರ ಅವರು ಡರ್ಬನ್ನಲ್ಲಿ ಮೇ 20 ರಿಂದ 28ರ ವರೆಗೆ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ಟೇಬಲ್ ಟೆನಿಸ್ ಫೆಡರೇಷನ್ ಆಫ್ ಇಂಡಿಯಾ (ಟಿಟಿಎಫ್ಐ) ಆಯ್ಕೆ ಸಮಿತಿಯು 59ನೇ ಆವೃತ್ತಿಯ ಚಾಂಪಿಯನ್ಷಿಪ್ಗೆ 11 ಸದಸ್ಯರ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಿತು. ಐವರು ಪುರುಷರು ಮತ್ತು ಆರು ಮಂದಿ ಮಹಿಳೆಯರು ತಂಡದಲ್ಲಿದ್ದಾರೆ. ಕರ್ನಾಟಕದ ಅರ್ಚನಾ ಕಾಮತ್ ಅವರು ಸ್ಥಾನ ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ಶರತ್ ಅಲ್ಲದೆ ಜಿ.ಸತ್ಯನ್, ಮಾನುಷ್ ಶಾ, ಹರ್ಮೀತ್ ದೇಸಾಯಿ ಮತ್ತು ಮಾನವ್ ಥಾಕರ್ ಇದ್ದಾರೆ. ಮಹಿಳೆಯರ ವಿಭಾಗದಲ್ಲಿ ಮಣಿಕಾ ಮತ್ತು ಅರ್ಚನಾ ಜತೆಗೆ ಶ್ರೀಜಾ ಅಕುಲಾ, ಸುತೀರ್ಥಾ ಮುಖರ್ಜಿ, ರೀತ್ ರಿಷ್ಯಾ ಮತ್ತು ದಿಯಾ ಚಿತಾಳೆ ಅವರು ಕಣಕ್ಕಿಳಿಯಲಿದ್ದಾರೆ.
ಸುಭಜಿತ್ ಸಹಾ ಮತ್ತು ಮಮತಾ ಪ್ರಭು ಅವರು ಕ್ರಮವಾಗಿ ಪುರುಷ ಹಾಗೂ ಮಹಿಳಾ ತಂಡಗಳ ಕೋಚ್ ಆಗಿದ್ದಾರೆ.