ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು–ಗೆಲುವು ಅರಗಿಸಿಕೊಳ್ಳಲು ಸ್ಥಿರ ಮನಸ್ಸು ಅಗತ್ಯ...

Last Updated 28 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪ್ರತಿವರ್ಷ ಆಗಸ್ಟ್‌ 29ನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸುವ ಮುಖ್ಯ ಉದ್ದೇಶ ಮಹತ್ತರ ಕ್ರೀಡೆಗಳ ಅರಿವನ್ನು ಮತ್ತು ಅವುಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಕ್ರೀಡಾಪಟುಗಳೆಂದು ಗುರುತಿಸಿಕೊಳ್ಳುವುದು. ಈ ಕ್ರೀಡೆಗಳಲ್ಲಿ ಅಂತರ್‌ರಾಜ್ಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬಹುದು. ನಮ್ಮ ದೇಶದ ಅಭಿಮಾನವನ್ನು ಹೆಚ್ಚಿಸುವುದಾಗಿದೆ.

ಆಟಗಳು ಎಂದರೆ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಖುಷಿ. ಕಿರಿಯರಿಂದ ಹಿರಿಯರವರೆಗೂ ಆಟಗಳೆಂದರೆ ಎಲ್ಲಿಲ್ಲದ ಉತ್ಸಾಹ. ಆಟದ ವಿಷಯ ಬಂದ ಕೂಡಲೇ ಹಲವಾರು ಪರಿಣತ ಕ್ರೀಡಾಪಟುಗಳು ನಮ್ಮ ಕಣ್ಣೆದುರಿಗೆ ಸುಳಿದಾಡುತ್ತಾರೆ. ಮಕ್ಕಳು ಕ್ರಿಕೆಟ್ ಆಡುವಾಗ ಗಮನಿಸಬಹುದು ನಾನು ಕಪಿಲ್, ನೀನು ಅನಿಲ್ ಕುಂಬ್ಳೆ, ಅವನು ಸಚಿನ್ ತೆಂಡೂಲ್ಕರ್, ಇವನು ಧೋನಿ... ಹೀಗೆ ಹಲವಾರು ಪ್ರಸಿದ್ಧ ಕ್ರೀಡಾಪಟುಗಳ ಹೆಸರನ್ನಿಟ್ಟುಕೊಂಡು ಆಟವನ್ನು ಆಡುತ್ತಾರೆ. ಅದೊಂಥರಾ ಏನೋ ಖುಷಿ. ಶಾಲೆಯಲ್ಲಿ ಓಟದ ಸ್ಪರ್ಧೆ ಇರುವಾಗ, ಹೇ ನಮ್ಮ ಪಿ.ಟಿ.ಉಷಾ ಎಲ್ಲಿ? ಅವಳೇ ಈ ಸಾರಿ ಫಸ್ಟ್ ಎಂದು ನಿಖರವಾಗಿ ಗುರುತಿಸಿಬಿಟ್ಟಿರುತ್ತೇವೆ.

ಶಾಲೆಯಲ್ಲಿ ಆಟದ ಸಮಯ ಆದರಂತೂ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಆಟದಲ್ಲಿ ಬೀಳ್ತಾರೆ, ಏಳ್ತಾರೆ, ಕೂಗಾಡ್ತಾರೆ, ಅಳ್ತಾರೆ, ನಗ್ತಾರೆ, ಜಗಳಾ ಮಾಡ್ತಾರೆ, ಕೋಪ ಮಾಡ್ಕೊಳ್ತಾರೆ ಕೊನೆಗೆ ಮರುದಿನ ಅದೇ ಆಟದ ಸಮಯದಲ್ಲಿ ಒಂದಾಗಿ ಕೂಡಿಕೊಂಡು ಆಟಾಡ್ತಾರೆ. ಎಂಥ ಸೋಜಿಗ ಅಲ್ವಾ! ಆಟವೇ ಅವರನ್ನು ಒಂದು ಮಾಡುತ್ತದೆ. ಮಕ್ಕಳಿಗೆ ಆಟಗಳೆಂದರೆ ಪಂಚಪ್ರಾಣ. ಮನೆಯಲ್ಲಿ ಹೇಳದೇ ಮಕ್ಕಳೊಡಗೂಡಿ ಆಟವಾಡಲು ಹೋಗಿ ಅಪ್ಪ ಅಮ್ಮಂದಿರಿಗೆ ಗಾಬರಿಗೊಳಿಸುತ್ತಾರೆ. ಆಟ ಮುಗಿಸಿ ಮನೆಗೆ ಬಂದಾಗ ಹೊಡೆತ, ಬೈಯೋದು ಇದ್ದಿದ್ದೆ.

ಆಟಗಳಾಡುವುದರಿಂದ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ. ಹಸಿವು, ನಿದ್ರೆ, ದೈನಂದಿನ ಚಟುವಟಿಕೆಗಳು ಸರಿಯಾಗಿರುತ್ತವೆ. ಇಂದಿನ ಪ್ರತಿಯೊಬ್ಬ ತಂದೆ ತಾಯಿಗಳಿಗೆ ತಮ್ಮ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಯಾವುದಾದರೊಂದು ಕ್ಷೇತ್ರದಲ್ಲಿ ವಿಶೇಷತೆಯನ್ನು ಹೊಂದಿರಬೇಕೆಂಬ ಅಪೇಕ್ಷೆಯೊಂದಿಗೆ, ತಮ್ಮ ಮಕ್ಕಳನ್ನು ಚೆಸ್, ಕರಾಟೆ, ವಾಲಿಬಾಲ್, ಕ್ರಿಕೆಟ್, ರನ್ನಿಂಗ್, ಸ್ವಿಮ್ಮಿಂಗ್, ಡ್ರಾಯಿಂಗ್, ನೃತ್ಯ, ನಾಟಕ, ಸಿಂಗಿಂಗ್, ಹೀಗೆ ಇನ್ನೂ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ.

ಯಾವುದೇ ಆಟಗಳು ಸ್ಪರ್ಧೆಯನ್ನು ಹೊಂದಿರುತ್ತವೆ. ಅಂದಾಗ ಮಾತ್ರ ಸ್ಪರ್ಧೆ ಎನಿಸಿಕೊಳ್ಳುತ್ತವೆ. ಸ್ಪರ್ಧೆ ಎನ್ನುವುದು ಸಾಧಿಸಲು ಪ್ರೇರೇಪಿಸುತ್ತದೆ. ಛಲ ಬೇರೂರುತ್ತದೆ. ಪ್ರಯತ್ನ ಬಲವಾಗಿರುತ್ತದೆ. ಆಟದಲ್ಲಿ ಸೋಲು ಗೆಲವು ಕೂಡ ಹೀಗೆಯೆ. ಪ್ರಥಮವಾಗಿ ಬರುವವರು ಸೋಲಬಹುದು ಮತ್ತು ಸೋಲುವವರು ಪ್ರಥಮ ಸ್ಥಾನವನ್ನು ಗಳಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಪ್ಪುಗಳನ್ನು ತಿದ್ದಿಕೊಂಡು ಸಾಧನೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತುತ್ತಾ ಹೋಗಬೇಕು.

ಎಲ್ಲ ಸ್ಪರ್ಧೆಗಳಲ್ಲಿ ನಾನೇ ಬರಬೇಕು ಎನ್ನುವುದು ಅಹಂಗೆ ದಾರಿ ಮಾಡಿಕೊಡುತ್ತದೆ. ಎಲ್ಲಿ ಅಹಂ ಇರುತ್ತದೋ ಅಲ್ಲಿ ಸೋಲನ್ನು ಎದುರಿಸುವುದು ಕಷ್ಟವಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆದರೆ ಸೋಲು ಗೆಲುವನ್ನು ಎದುರಿಸಲು ನಮ್ಮ ಮನಸ್ಸು ಸ್ಥಿರವಾಗಿರಬೇಕು. ಎರಡನ್ನೂ ಸಮನಾದ ಮನಸ್ಸಿನಿಂದ ಸ್ವೀಕರಿಸಿದಾಗ ಅಹಂ, ಖಿನ್ನತೆ, ವಿರೋಧ, ಅವಮಾನಗಳಿಗೆ ದಾರಿಯೇ ಇರುವುದಿಲ್ಲ. ಉತ್ತಮ ಕ್ರೀಡಾಪಟು ಇವುಗಳನ್ನು ಗಮನಿಸದೇ ತನ್ನ ಸತತ ಪ್ರಯತ್ನದಲ್ಲಿಯೇ ಗುರಿಯನ್ನು ತಲುಪಲು ಸಿದ್ಧನಾಗುತ್ತಲೇ ಇರುತ್ತಾನೆ.

ಪ್ರತಿಯೊಂದು ಆಟವನ್ನು ಅಥವಾ ಕ್ರೀಡೆಗಳನ್ನು ಕಲಿಸಿ, ತರಬೇತಿಯನ್ನು ನೀಡಲು, ಉತ್ತಮ ತರಬೇತುದಾರ ಕ್ರೀಡಾಪಟುಗಳಿಗೆ ಅತ್ಯವಶ್ಯಕ. ತರಬೇತುದಾರ ಪ್ರತಿಯೊಬ್ಬ ಕ್ರೀಡಾಪಟುವನ್ನು ಒಂದೇ ರೀತಿಯಲ್ಲಿ ಕಾಣುತ್ತಾನೆ. ಯಾರಿಗೂ ಅಭ್ಯಂತರ ಮಾಡುವುದಿಲ್ಲ. ಯಾರನ್ನು ಯಾವ ರೀತಿ ತಿದ್ದಿತೀಡಿ ಒಬ್ಬ ಉತ್ತಮ ಕ್ರೀಡಾಪಟುವನ್ನಾಗಿ ಮಾಡಬೇಕೆಂದು ಪಣ ತೊಟ್ಟಿರುತ್ತಾನೆ. ನುರಿತ, ಅನುಭವಿ ತರಬೇತುದಾರ ಬೆಳೆಯುತ್ತಿರುವಂಥ ಕ್ರೀಡಾಪಟುಗಳಿಗೆ ತರಬೇತಿ ನೀಡಿದಲ್ಲಿ, ಇಂದಿನ ಯಾವುದೇ ಆಟಗಾರ ದೇಶದ ಭವಿಷತ್ತಿನ ಉತ್ತಮ, ಹೆಮ್ಮೆಯ ಆಟಗಾರರಾಗಬಹುದು.

-ಶ್ರೀದೇವಿ ಬಿರಾದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT