ಲುಸಾನ್ (ಪಿಟಿಐ): ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಸಿಇಒ ನೇಮಕ ಮಾಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕಳವಳ ವ್ಯಕ್ತಪಡಿಸಿದೆ.
ಭಾರತ ಕುಸ್ತಿ ಫೆಡರೇಷನ್ಅನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು, ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಜೊತೆ ನಿಕಟವಾಗಿ ಚರ್ಚಿಸಿ ಬಗೆಹರಿಸುವಂತೆಯೂ ಐಒಎಗೆ ಒಲಿಂಪಿಕ್ ಸಮಿತಿ ಒತ್ತಾಯಿಸಿದೆ.
ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐಒಸಿ ಈ ಬಗ್ಗೆ ಕಟು ಮಾತುಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ನೇಮಕಗಳನ್ನು ನಡೆಸುವಂತೆ ಭಾರತದ ಒಲಿಂಪಿಕ್ ಸಂಸ್ಥೆ ಹಲವು ಬಾರಿ ನಿರ್ದೇಶನ ನೀಡಲಾಗಿದೆ. ಸಂಸ್ಥೆಯ ನಿಯಮಾವಳಿ ಪ್ರಕಾರ ಸಿಇಒ/ ಮಹಾ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತ ಕುಸ್ತಿ ಫೆಡರೇಷನ್ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರಮುಖ ಮಹಿಳಾ ಪೈಲ್ವಾನರು ನವದೆಹಲಿಯಲ್ಲಿ ಧರಣಿ ಕುಳಿತಿದ್ದು ಎರಡು ತಿಂಗಳು ಕಾಲ ಎಲ್ಲೆಡೆ ಸುದ್ದಿಯಾಗಿತ್ತು. ವಿನೇಶಾ ಫೋಗಟ್, ಸಾಕ್ಷಿ ಮಲಿಕ್ ಜೊತೆಗೆ ಬಜರಂಗ್ ಪೂನಿಯಾ ಅವರೂ ಹೋರಾಟದ ಮುಂಚೂಣಿಯಲ್ಲಿದ್ದರು.
ಒಲಿಂಪಿಕ್ ಸಮಿತಿಯ ಈ ವರ್ಷದ ಅಧಿವೇಶನ ಮುಂಬೈನಲ್ಲಿ ನಡೆಯವುದನ್ನು ಖಚಿತಪಡಿಸಿದ್ದ, ಐಒಸಿ, ಭಾರತ ಒಲಿಂಪಿಕ್ ಸಂಸ್ಥೆಯು ಸಿಒ ನೇಮಕದಲ್ಲಾಗುತ್ತಿರುವ ವಿಳಂಬದ ಬಗ್ಗೆ ಕಳೆದ ಮಾರ್ಚ್ನಲ್ಲಿ ಗಮನ ಸೆಳೆದಿತ್ತು.
ಸುಪ್ರೀಂ ಕೋರ್ಟ್ ರಚಿಸಿದ ಸಮಿತಿ ರೂಪಿಸಿರುವ ಹೊಸ ನಿಯಮಾವಳಿಗೆ ಐಒಸಿ ಕೂಡ ಒಪ್ಪಿಗೆ ನೀಡಿದ್ದು, ಇದರ ಪ್ರಕಾರ ಭಾರತ ಒಲಿಂಪಿಕ್ ಸಂಸ್ಥೆಯು ಸಿಇಒ ಹುದ್ದೆಗೆ ನೇಮಕ ಮಾಡಬೇಕಾಗಿದೆ. ಈ ಹಿಂದೆ ಮಹಾ ಪ್ರಧಾನ ಕಾರ್ಯದರ್ಶಿ ವಹಿಸುತ್ತಿದ್ದ ಕಾರ್ಯಭಾರವನ್ನು ಸಿಇಒ ವಹಿಸಬೇಕಾಗಿದೆ.
ಐಒಎ ಅಧ್ಯಕ್ಷೆ ಮತ್ತು ಮಾಜಿ ಸ್ಪ್ರಿಂಟರ್ ಪಿ.ಟಿ. ಉಷಾ ನೇತೃತ್ವದ ಕಾರ್ಯಕಾರಿ ಮಂಡಳಿ (ಐಒಎ ಕೌನ್ಸಿಲ್) ಅಧಿಕಾರ ವಹಿಸಿಕೊಂಡ ತಿಂಗಳ ಒಳಗೆ ಸಿಇಒ ನೇಮಕ ಆಗಬೇಕಾಗಿತ್ತು. ಆದರೆ ಕಾರ್ಯಕಾರಿ ಮಂಡಳಿ ಕಳೆದ ವರ್ಷದ ಡಿಸೆಂಬರ್ 10ರಂದು ಅಧಿಕಾರ ವಹಿಸಿದ್ದು, ಏಳು ತಿಂಗಳಾದರೂ ಸಿಇಒ ನೇಮಕ ಆಗಿಲ್ಲ.
ಐಒಎ ಮಹಾ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಚೌಬೆ ಅವರು ಸಿಇಒ ನಿರ್ವಹಿಸುವ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಸಿಇಒ ಅವರು ಐಒಎ ಕಾರ್ಯಕಾರಿ ಮಂಡಳಿಯ ಅಧಿಕಾರೇತ್ತರ ಸದಸ್ಯರಾಗಿದ್ದು, ಮತದಾನದ ಹಕ್ಕು ಹೊಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.