ನವದೆಹಲಿ: ದೆಹಲಿಯ ಪೂರ್ವಭಾಗದಲ್ಲಿ ನಿರ್ಮಾಣವಾದ ಎಕ್ಸ್ಪ್ರೆಸ್ ಹೆದ್ದಾರಿಯ ಉದ್ಘಾಟನೆ ತಡವಾದುದಕ್ಕೆ ಕೆಂಡಾಮಂಡಲವಾದ ಸುಪ್ರಿಂಕೋರ್ಟ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (NHAI) ತರಾಟೆಗೆ ತೆಗೆದುಕೊಂಡಿದೆ.
ಇದುವರೆಗೂ ಯಾಕೆ ಹೆದ್ದಾರಿಯನ್ನು ಉದ್ಘಾಟಿಸಲಿಲ್ಲ ಎಂದು ಕೇಳಿದ ಸುಪ್ರಿಂ, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಯಾಕೆ ಕಾಯುತ್ತಿದ್ದೀರಿ? ಎಂದು ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ನೇತೃತ್ವದ ಪೀಠ ಮಾಲಿನ್ಯ ಸಂಬಂಧ ನಡೆಯುತ್ತಿದ್ದ ವಿಚಾರಣೆ ವೇಳೆ ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರವು ಏ.29ರಂದು ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಮೋದಿ ಅವರು ಬೇರೆ ಕಾರ್ಯಗಳಲ್ಲಿ ನಿರತರಾದ ಕಾರಣ ಉದ್ಘಾಟನೆ ನಡೆಯಲಿಲ್ಲ ಎಂದು ತಿಳಿಸಿತು.
ಮೇಘಾಲಯ ಹೈಕೋರ್ಟ್ ಯಾವುದೇ ಅಧಿಕೃತ ಉದ್ಘಾಟನೆಯಿಲ್ಲದೇ ಸತತ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿದರ್ಶನ ನೀಡಿದ ಪೀಠ ಯಾಕೆ ಹೆದ್ದಾರಿಯ ಉದ್ಘಾಟನೆಗೆ ಕಾಯಬೇಕು ಎಂದು ಕೇಳಿದೆ.
ಈಗಾಗಲೇ ದೆಹಲಿ ಟ್ರಾಫಿಕ್ ಸಮಸ್ಯೆಯಿಂದ ಹೈರಾಣವಾಗಿದೆ. ಹೆದ್ದಾರಿಯ ಉದ್ಘಾಟನೆ ತಡವಾದಲ್ಲಿ ಜನರು ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ ಕಾರಣ ಯಾರಿಗೂ ಕಾಯದೇ ಇದೇ ಮೇ31 ಅಥವಾ ಅಷ್ಟರೊಳಗೆ ಹೆದ್ದಾರಿಯ ಉದ್ಘಾಟನೆ ನಡೆಯಬೇಕು ಎಂದು ಸುಪ್ರೀಂ, ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಟ್ರಾಫಿಕ್ ನಿಯಂತ್ರಣಕ್ಕೆ ನಗರದ ಹೊರಗೆ ಪೂರ್ವ ಪೆರಿಪೆರಲ್ ಕಾರಿಡಾರ್ ಒಳಗೊಂಡಂತೆ 135 ಕಿ.ಮೀ ಉದ್ದದ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಸುಪ್ರಿಂಕೋರ್ಟ್ 2006ರಲ್ಲೇ ಆದೇಶ ಹೊರಡಿಸಿತ್ತು. ಆದರೆ 2015ರಲ್ಲಿ ₹5763 ವೆಚ್ಚದಲ್ಲಿ ಪೂರ್ವ ಪೆರಿಪೆರಲ್ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭಿಸಿದ ಸರ್ಕಾರ 400 ದಿನಗಳ ಗಡುವು ನೀಡಿತ್ತು.