ಮೈಸೂರು: ಕರ್ನಾಟಕದ ಕೇಶವ್ ಕೊಠಾರಿ ಮತ್ತು ತಮಿಳುನಾಡಿನ ವಿ.ಪ್ರಣವ್ ಅವರು ಇಲ್ಲಿ ಆರಂಭವಾದ 15 ವರ್ಷ ವಯಸ್ಸಿನೊಳಗಿನವರ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಜಂಟಿ ಮುನ್ನಡೆಯಲ್ಲಿದ್ದಾರೆ.
ಮೈಸೂರು ವಿ.ವಿ.ಜಿಮ್ನೇಶಿಯಂ ಹಾಲ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಮೊದಲ ಎರಡು ಸುತ್ತುಗಳ ಬಳಿಕ ಇಬ್ಬರೂ ತಲಾ ಎರಡು ಪಾಯಿಂಟ್ ಕಲೆಹಾಕಿದ್ದಾರೆ.
ಅಗ್ರಶ್ರೇಯಾಂಕದ ಆಟಗಾರ ಪ್ರಣವ್ ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ಎಂ.ಎಸ್.ಚೇತನ್ ಮತ್ತು ಪ್ರಥಮ್ ಸಿಂಗ್ ವಿರುದ್ಧ ಗೆದ್ದರು. ಎರಡನೇ ಶ್ರೇಯಾಂಕದ ಕೇಶವ್ ಅವರು ಆರ್.ಕೆ.ಚಿನ್ಮಯಿ ಹಾಗೂ ಎಂ.ಯು.ತೇಜಸ್ ಅವರನ್ನು ಸೋಲಿಸಿದರು.
ನ.25ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದ 298 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.