ಸಿಡ್ನಿ: ಕರ್ನಾಟಕದ ಮಿಥುನ್ ಮಂಜುನಾಥ್ ಮತ್ತು ಸಮೀರ್ ವರ್ಮಾ ಅವರು ಮಂಗಳವಾರದಿಂದ ಇಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪರ ಕಣಕ್ಕಿಳಿಯಲಿದ್ದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸಮೀರ್ ಅವರು, ಆಸ್ಟ್ರೇಲಿಯಾದ ನೇಥನ್ ತಾಂಗ್ ಅವರನ್ನು ಎದುರಿಸುವರು.
ಮಿಥುನ್ ಅವರಿಗೆ ಮೊದಲ ಪಂದ್ಯದಲ್ಲಿ ಸಿಂಗಪುರದ ಲೋಹ್ ಕೀನ್ ಈವ್ ಸವಾಲು ಎದುರಾಗಿದೆ.
ಕಿದಂಬಿ ಶ್ರೀಕಾಂತ್ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಡಿಸೆಂಬರ್ನಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಟೂರ್ ಫೈನಲ್ಸ್ಗೆ ಅರ್ಹತೆ ಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ. ವಿಶ್ವ ಟೂರ್ ಫೈನಲ್ಸ್ಗೆ ಪ್ರವೇಶ ಪಡೆಯಲು ಅವರು ಆಸ್ಟ್ರೇಲಿಯಾ ಓಪನ್ ಟೂರ್ನಿ ಗೆಲ್ಲುವುದು ಅಗತ್ಯವಿತ್ತು.
ಲಕ್ಷ್ಯ ಸೇನ್, ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ – ಚಿರಾಗ್ ಶೆಟ್ಟಿ ಕೂಡ ಈಗಾಗಲೇ ಈ ಟೂರ್ನಿಯಲ್ಲಿ ಆಡುವುದಿಲ್ಲ ಎಂದಿದ್ದಾರೆ.
ಮಹಿಳಾ ಸಿಂಗಲ್ಸ್ನಲ್ಲಿ ತಾನ್ಯಾ ಹೇಮಂತ್, ಅನ್ವೇಷಾ ಗೌಡ ಕಣಕ್ಕಿಳಿಯಲಿದ್ದಾರೆ. ಡಬಲ್ಸ್ನಲ್ಲಿ ಸಿಮ್ರನ್ ಸಿಂಘಿ– ರಿತಿಕಾ ಥಕರ್, ಪುರುಷರ ಡಬಲ್ಸ್ನಲ್ಲಿ ಹರಿಹರನ್ ಅಮ್ಸಕರುಣನ್– ರುಬನ್ ಕುಮಾರ್ ರೆಥಿನ್ಸಭಾಪತಿ ಆಡಲಿದ್ದಾರೆ.