ಹುಬ್ಬಳ್ಳಿ: ಕರ್ನಾಟಕದ ಸೈಕ್ಲಿಸ್ಟ್ಗಳು, ಹೈದರಾಬಾದ್ನಲ್ಲಿ ಬುಧವಾರ ಮುಕ್ತಾಯವಾದ 72ನೇ ಸೀನಿಯರ್, 49ನೇ ಜೂನಿಯರ್ ಮತ್ತು 35ನೇ ಸಬ್ ಜೂನಿಯರ್ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಒಟ್ಟು ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಹತ್ತು ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಕೊನೆಯ ದಿನ ನಡೆದ ಜೂನಿಯರ್ ಬಾಲಕಿಯರ 4 ಕಿ.ಮೀ. ತಂಡ ಪರ್ಸೂಟ್ ವಿಭಾಗದಲ್ಲಿ ಕರ್ನಾಟಕ ಚಿನ್ನದ ಪದಕ ಜಯಿಸಿತು. ಬೆಂಗಳೂರು ಜಿಲ್ಲೆಯ ಕೀರ್ತಿ ರಂಗಸ್ವಾಮಿ, ಬಾಗಲಕೋಟೆ ಜಿಲ್ಲೆಯ ಚೈತ್ರಾ ಬೋರ್ಜಿ, ಭಾಗ್ಯಶ್ರೀ ಮಠಪತಿ ಮತ್ತು ವಿಜಯಪುರ ಜಿಲ್ಲೆಯ ಅಂಕಿತಾ ರಾಠೋಡ್ ಅವರನ್ನು ಒಳಗೊಂಡ ತಂಡ ಐದು ನಿಮಿಷ 45.053 ಸೆಕೆಂಡ್ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿತು.
ಬಾಗಲಕೋಟೆ ಜಿಲ್ಲೆಯ ದಾನಮ್ಮ ಚಿಚಖಂಡಿ, ವಿಜಯಪುರ ಕ್ರೀಡಾನಿಲಯದ ಸೌಮ್ಯಾ ಅಂತಾಪುರ, ಕಾವೇರಿ ಮುರನಾಳ ಮತ್ತು ಕೀರ್ತಿ ರಂಗಸ್ವಾಮಿ ಅವರನ್ನು ಒಳಗೊಂಡ ರಾಜ್ಯ ಮಹಿಳಾ ತಂಡ 4 ಕಿ.ಮೀ. ಪರ್ಸೂಟ್ ವಿಭಾಗದಲ್ಲಿ ಐದು ನಿಮಿಷ 44.937 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಜಯಿಸಿತು. ಸಬ್ ಜೂನಿಯರ್ ವಿಭಾಗದಲ್ಲಿ ಕರ್ನಾಟಕ ರನ್ನರ್ಸ್ ಅಪ್ ಸ್ಥಾನ ಗಳಿಸಿತು.