ನಾವೆಲ್ಲ ಮತ ಚಲಾಯಿಸಿ ಪ್ರಜಾಪ್ರತಿನಿಧಿಗಳಿಗೆ ಕೊಡುವ ಅಧಿಕಾರ ಬೆಂಕಿಪೊಟ್ಟಣ ಇದ್ದ ಹಾಗೆ. ಅಂಥ ಬೆಂಕಿಪೊಟ್ಟಣವನ್ನು ಯಾರ ಕೈಗೆ ಕೊಡುತ್ತೇವೆ? ದೀಪ ಹಚ್ಚುವವರ ಕೈಗೆ ಕೊಡಬೇಕೋ, ಬೆಂಕಿ ಹಚ್ಚುವವರ ಕೈಗೆ ಕೊಡಬೇಕೋ ಎನ್ನುವುದನ್ನೂ ಯೋಚಿಸಬೇಕು. ನಾವೊಬ್ಬರು ಮತ ಹಾಕದೇ ಇರುವುದರಿಂದ ದೀಪ ಹಚ್ಚುವವರ ಕೈಗೆ ಸಿಗಬೇಕಾದ ಅಧಿಕಾರ ಬೆಂಕಿ ಹಚ್ಚುವವರ ಕೈಗೋ, ದೊಂಬಿ ಏಳಿಸುವವರ ಕೈಗೋ ಸಿಕ್ಕಿಬಿಟ್ಟರೆ ಇಡೀ ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತದೆ. ಅದಕ್ಕೆ ನಾವೇ ನೇರ ಕಾರಣ ಆಗಿಬಿಡುತ್ತೇವೆ.