ಚೆನ್ನೈ: ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್, ಸೋಮವಾರದಿಂದ ನಡೆಯುವ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಒಟ್ಟು 64 ಮಂದಿ ಆಟಗಾರರು ಕಣದಲ್ಲಿರುವ ಟೂರ್ನಿಯಲ್ಲಿ ಎಡಗೈ ಆಟಗಾರ ಪ್ರಜ್ಞೇಶ್ ಅಗ್ರಶ್ರೇಯಾಂಕ ಹೊಂದಿದ್ದಾರೆ. ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ. ಪ್ರಜ್ಞೇಶ್, ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತಿದ್ದರು. ಇಟಲಿ ಎದುರಿನ ಡೇವಿಸ್ ಕಪ್ ಪಂದ್ಯದಲ್ಲೂ ಅವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿರಲಿಲ್ಲ. ತವರಿನಲ್ಲಿ ಪ್ರಶಸ್ತಿ ಜಯಿಸಿ ಹಿಂದಿನ ಎರಡು ಟೂರ್ನಿಗಳಲ್ಲಿ ಎದುರಾದ ನಿರಾಸೆ ಮರೆಯಲು ಅವರು ಕಾತರರಾಗಿದ್ದಾರೆ.
ರಾಮಕುಮಾರ್ ರಾಮನಾಥನ್ ಅವರು ಹಂಗರಿಯಲ್ಲಿ ನಡೆಯುತ್ತಿರುವ ಚಾಲೆಂಜರ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಈ ಟೂರ್ನಿಗೆ ಅಲಭ್ಯರಾಗಿದ್ದಾರೆ.
11ನೇ ಶ್ರೇಯಾಂಕದ ಆಟಗಾರ ಸಾಕೇತ್ ಮೈನೇನಿಗೂ ಆರಂಭಿಕ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ.
16ನೇ ಶ್ರೇಯಾಂಕದ ಆಟಗಾರ ಶಶಿಕುಮಾರ್ ಮುಕುಂದ್, ಸುಮಿತ್ ನಗಾಲ್, ಎನ್.ವಿಜಯ್ ಸುಂದರ್ ಪ್ರಶಾಂತ್, ರಾಷ್ಟ್ರೀಯ ಚಾಂಪಿಯನ್ ಸಿದ್ದಾರ್ಥ್ ವಿಶ್ವಕರ್ಮ ಮತ್ತು ಮನೀಷ್ ಸುರೇಶ್ ಕುಮಾರ್ ಅವರೂ ಅಂಗಳಕ್ಕಿಳಿಯಲಿದ್ದಾರೆ.
ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್, ದಕ್ಷಿಣ ಕೊರಿಯಾದ ಡುಖೀ ಲೀ, ಫ್ರಾನ್ಸ್ನ ಕಾರ್ನೆಟಿನ್ ಮೌಟೆಟ್, ಈಜಿಪ್ಟ್ನ ಮೊಹಮ್ಮದ್ ಸಫಾವತ್ ಹಾಗೂ ಇಟಲಿಯ ಜಿಯಾನ್ಲುಕಾ ಮಗೇರ್ ಅವರೂ ಪ್ರಶಸ್ತಿಯ ಕನಸಿನಲ್ಲಿದ್ದಾರೆ.