ನ್ಯೂಯಾರ್ಕ್: ನಾಯಕ ಬಾಬರ್ ಆಜಂ ಮತ್ತು ಪ್ರಮುಖ ವೇಗಿ ಶಹೀನ್ ಶಾ ಅಫ್ರಿದಿ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಪಾಕಿಸ್ತಾನದ ಸಹಾಯಕ ಕೋಚ್ ಅಜರ್ ಮಹಮೂದ್ ತಿಳಿಸಿದ್ದಾರೆ. ಅವರಿಬ್ಬರೂ ಪರಸ್ಪರ ಮಾತನಾಡುವುದಿಲ್ಲ ಎಂಬ ಮಾಜಿ ನಾಯಕ ವಾಸಿಂ ಅಕ್ರಂ ಹೇಳಿಕೆ ನಿಜವಲ್ಲ ಎಝದು ಸ್ಪಷ್ಟಪಡಿಸಿದ್ದಾರೆ.
ಭಾರತ ವಿರುದ್ಧ ಸೋತ ನಂತರ ಹೊರಗೆ ಹೋಗದೇ ಹೋಟೆಲ್ ರೂಮ್ನಲ್ಲಿರಬೇಕಿತ್ತು ಎಂದು ಹೇಳಿರುವವರನ್ನೂ ಅಜರ್ ಟೀಕಿಸಿದ್ದಾರೆ. ಪಾಕ್ ತಂಡದಲ್ಲಿ ಬಣಗಳಿದ್ದು ಒಂದನ್ನು ನಾಯಕ ಬಾಬರ್ ಆಜಂ ಮತ್ತೊಂದನ್ನು ಶಹೀನ್ ಅಫ್ರಿದಿ ನಿಯಂತ್ರಿಸುತ್ತಿದ್ದಾರೆ ಎಂಬ ಬಗ್ಗೆ ಮಾತುಗಳು ಕೇಳಿಬಂದಿವೆ.
‘ವಾಸಿಂ ಹಾಗೆ ಹೇಳಿರಬಹುದು. ಆದರೆ ನನಗೆ ಗೊತ್ತಿಲ್ಲ. ಅವರಿಬ್ಬರು ಮಾತನಾಡುತ್ತಾರೆ. ಒಳ್ಳೆಯ ಸ್ನೇಹಿತರು. ಅವರಿಬ್ಬರೂ ಪಾಕ್ ತಂಡದ ಭಾಗ. ನಾವು ನಿರ್ದಿಷ್ಟ ವ್ಯಕ್ತಿಯಿಂದಾಗಿ ಪಂದ್ಯ ಸೋತಿಲ್ಲ. ಸೋತಿದ್ದು ನಮ್ಮ ತಪ್ಪುಗಳಿಂದ’ ಎಂದು ಅಜರ್ ಭಾರತ ತಂಡಕ್ಕೆ ಆರು ರನ್ಗಳಿಂದ ಸೋತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಾಧ್ಯಮಗೋಷ್ಠಿಗಳಿಗೆ ಆಟಗಾರರು ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ, ಸೋಲಿಗೆ ನೆರವು ಸಿಬ್ಬಂದಿ ಸಹ ಅಷ್ಟೇ ಉತ್ತರದಾಯಿಗಳಾಗಿರುತ್ತಾರೆ. ಆಟಗಾರರು ಮಾಧ್ಯಮಗಳ ಮುಂದೆ ಬರದಂತೆ ತಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.
ಭಾರತಕ್ಕೆ ಸೋತ ನಂತರ ಅಜರ್ ಮಹಮೂದ್, ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ಮತ್ತು ನಾಯಕ ಬಾಬರ್ ಆಜಂ ರೆಸ್ಟೊರೆಂಟ್ ಇಲ್ಲಿನ ರೆಸ್ಟೊರೆಂಟ್ ಒಂದರಲ್ಲಿ ರಾತ್ರಿ ಊಟ ಮಾಡಿದ್ದು, ವಿಷಯ ಅಭಿಮಾನಿಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ದಾರಿ ಮಾಡಿದೆ.
‘ನೀನೂ ಅಲ್ಲಿದ್ದಿ. ನೀನು ಅಲ್ಲಿರುವುದನ್ನು ನೋಡಿದ್ದೇನೆ’ ಎಂದು ಮಹಮೂದ್, ಈ ಬಗ್ಗೆ ಪ್ರಸ್ತಾಪಿಸಿದ ಪಾಕ್ ವರದಿಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.