ಹುಬ್ಬಳ್ಳಿ: ಆತಿಥೇಯ ನೈರುತ್ಯ ರೈಲ್ವೆ ತಂಡವು ಭಾನುವಾರ ಇಲ್ಲಿನ ಲೋಕೋಶೆಡ್ ಸಭಾಂಗಣದಲ್ಲಿ ಆರಂಭವಾದ 26ನೇ ಅಖಿಲ ಭಾರತ ರೈಲ್ವೆ ಚೆಸ್ ಚಾಂಪಿಯನ್ಷಿಪ್ನ ಎರಡು ಸುತ್ತುಗಳಲ್ಲೂ ಜಯಗಳಿಸುವ ಮೂಲಕ ಉತ್ತಮ ಮುನ್ನಡೆ ಪಡೆಯಿತು.
ನೈರುತ್ವ ರೈಲ್ವೆ ಕ್ರೀಡಾಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ತಂಡ ಚಾಂಪಿಯನ್ಷಿಪ್ ವಿಭಾಗದ ಸ್ವಿಸ್ ಲೀಗ್ ಮಾದರಿಯ ಮೊದಲ ಸುತ್ತಿನಲ್ಲಿ ನೈರುತ್ಯ ರೈಲ್ವೆ ತಂಡವು ಉತ್ತರ ಕೇಂದ್ರ ರೈಲ್ವೆ ವಿರುದ್ಧ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಶುಭಾರಂಭ ಮಾಡಿತು.
ಅಂತರರಾಷ್ಟ್ರೀಯ ಮಾಸ್ಟರ್ ಎಂ.ಎಸ್. ತೇಜಕುಮಾರ್, ರಾಕೇಶ್ ಅಗರ್ವಾಲ್ರನ್ನು ಮಣಿಸಿ ಉತ್ತಮ ಆರಂಭ ಒದಗಿಸಿದರು. ಎರಡನೇ ಹಣಾಹಣಿಯಲ್ಲಿ ಹಿಮಾಂಶು ಶರ್ಮ ಸುಮಿತ್ ಶ್ರೀವಾತ್ಸವ ಅವರನ್ನು ಸೋಲಿಸಿದರು. ಆ ಬಳಿಕ ಜೈದೀಪ್ ದತ್ತ, ಮೊಹಮ್ಮದ್ ಖಾನ್ ವಿರುದ್ಧ ಹಾಗೂ ಅಭಿಷೇಕ್ ದಾಸ್, ಜೆಕೆಎಸ್ ಚೌಹಾಣ್ ಅವರನ್ನು ಪರಾಭವಗೊಳಿಸುವ ಮೂಲಕ ಮುಂದಿನ ಸುತ್ತಿಗೆ ಮುನ್ನಡೆದರು. ಎರಡನೇ ಸುತ್ತಿನಲ್ಲೂ ಉತ್ತಮ ಪ್ರದರ್ಶನ ತೋರಿದ ನೈರುತ್ಯ ರೈಲ್ವೆ ತಂಡ 4–0 ಅಂಕಗಳಿಂದ ಆಗ್ನೇಯ ರೈಲ್ವೆ ತಂಡವನ್ನು ಮಣಿಸಿತು.
ಕಳೆದ ವರ್ಷ ಮೈಸೂರಿನಲ್ಲಿ ನಡೆದ 25ನೇ ಚಾಂಪಿಯನ್ಷಿಪ್ನ ವಿಜೇತ ಐಸಿಎಫ್, ರನ್ನರ್ ಅಪ್ ಪಶ್ಚಿಮ ರೈಲ್ವೆ ಸೇರಿದಂತೆ ಒಟ್ಟು 17 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. 25ರಿಂದ ವೈಯಕ್ತಿಕ ವಿಭಾಗದ ಸ್ಪರ್ಧೆ ಆರಂಭವಾಗಲಿದ್ದು, 125 ಆಟಗಾರರು ಭಾಗವಹಿಸಿದ್ದಾರೆ.
ಫಲಿತಾಂಶ: ಮೊದಲ ಸುತ್ತು: ಐಸಿಎಫ್ಗೆ 3.5–0.5ರಿಂದ ರೈಲ್ವೆ ಬೋರ್ಡ್ ವಿರುದ್ಧ ಗೆಲುವು. ಪಶ್ಚಿಮ ರೈಲ್ವೆಗೆ 3–1ರಿಂದ ಮೆಟ್ರೊ ರೈಲ್ವೆ ವಿರುದ್ಧ; ನೈರುತ್ಯ ರೈಲ್ವೆಗೆ 4–0ರಿಂದ ಉತ್ತರ ಕೇಂದ್ರ ರೈಲ್ವೆ ಎದುರು; ಕೇಂದ್ರ ರೈಲ್ವೆಗೆ 4–0ರಿಂದ ವಾಯವ್ಯ ರೈಲ್ವೆ ವಿರುದ್ಧ; ದಕ್ಷಿಣ ರೈಲ್ವೆಗೆ 3–1ರಿಂದ ಆಗ್ನೇಯ ಕೇಂದ್ರ ರೈಲ್ವೆ ವಿರುದ್ಧ; ಪೂರ್ವ ರೈಲ್ವೆಗೆ 4–0ರಿಂದ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ವಿರುದ್ಧ ಜಯ. ದಕ್ಷಿಣ ಕೇಂದ್ರ ರೈಲ್ವೆಗೆ 4–0ರಿಂದ ಪಶ್ಚಿಮ ರೈಲ್ವೆ ವಿರುದ್ಧ ಹಾಗೂ ಆಗ್ನೇಯ ರೈಲ್ವೆಗೆ 4–0ರಿಂದ ಡಿಎಲ್ಡಬ್ಲ್ಯು ವಾರಣಾಸಿ ವಿರುದ್ಧ ಗೆಲುವು.
ಎರಡನೇ ಸುತ್ತು: ಐಸಿಎಫ್ಗೆ 3.5–0.5 ಅಂತರದಿಂದ ಪೂರ್ವ ರೈಲ್ವೆ ವಿರುದ್ಧ ಗೆಲುವು; ದಕ್ಷಿಣ ರೈಲ್ವೆಗೆ 2.5–1.5 ರಿಂದ ಪಶ್ಚಿಮ ರೈಲ್ವೆ ವಿರುದ್ಧ; ಮೆಟ್ರೊ ರೈಲ್ವೆಗೆ 3–1ರಿಂದ ಡಿಎಂಡಬ್ಲ್ಯು ಪಾಟಿಯಾಲ ವಿರುದ್ಧ; ರೈಲ್ವೆ ಬೋರ್ಡ್ಗೆ 4–0ರಿಂದ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ವಿರುದ್ಧ ಗೆಲುವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.