ಚೆನ್ನೈ (ಪಿಟಿಐ): ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಭಿಸಿದ ಗೆಲುವಿನ ಆತ್ಮವಿಶ್ವಾದಲ್ಲಿ ರುವ ಭಾರತ ತಂಡ ಬುಧವಾರ ನಡೆಯುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.
ವಿಶ್ವಕಪ್ ಟೂರ್ನಿಗೆ ತಕ್ಕ ಸಿದ್ಧತೆ ನಡೆಸಲು ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಲಭಿಸುತ್ತಿರುವ ಕೊನೆಯ ಅವಕಾಶ ಇದಾಗಿದೆ. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಯ ಸಾಧಿಸಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯಕ್ಕಾಗಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸುವುದು ಭಾರತದ ಗುರಿ.
ಕಿವೀಸ್ ವಿರುದ್ಧ ನಡೆಯುವ ಅಭ್ಯಾಸ ಪಂದ್ಯದ ಪೂರ್ಣ ಪ್ರಯೋ ಜನ ಪಡೆದುಕೊಳ್ಳುವ ಗುರಿಯನ್ನು ಭಾರತ ಹೊಂದಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಅಭ್ಯಾಸ ಪಂದ್ಯ ದಲ್ಲಿ ಭಾರತ ತಂಡ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 38 ರನ್ಗಳ ಜಯ ಸಾಧಿಸಿತ್ತು. ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರೂ ಪಿಯೂಷ್ ಚಾವ್ಲಾ ಮತ್ತು ಹರಭಜನ್ ಸಿಂಗ್ ಒಳಗೊಂಡಂತೆ ಬೌಲರ್ಗಳು ಭಾರತದ ಗೆಲುವಿಗೆ ಕಾರಣರಾಗಿದ್ದರು.
ಕಿವೀಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಮಿಂಚುವುದು ಅಗತ್ಯ. ಅದರಲ್ಲೂ ಮುಖ್ಯವಾಗಿ ಗೌತಮ್ ಗಂಭೀರ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರು ಒಂದು ದೊಡ್ಡ ಇನಿಂಗ್ಸ್ ಕಟ್ಟಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಕನಸಿನಲ್ಲಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಈ ಪಂದ್ಯದಲ್ಲಿ ಆಡಲಿದ್ದಾರೆ. ಬೆಂಗಳೂರಿ ನ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಆಡಿರಲಿಲ್ಲ. ಆದರೆ ಜಹೀರ್ ಖಾನ್ ಈ ಪಂದ್ಯದಲ್ಲೂ ಕಣಕ್ಕಿಳಿಯುತ್ತಿಲ್ಲ.
ನ್ಯೂಜಿಲೆಂಡ್ ಕೂಡಾ ಗೆಲುವಿನ ವಿಶ್ವಾಸದಲ್ಲಿದೆ. ಆತಿಥೇಯರ ವಿರುದ್ಧ ಜಯ ಸಾಧಿಸಿದರೆ ವಿಶ್ವಕಪ್ಗೆ ಮುನ್ನ ಹೆಚ್ಚಿನ ಆತ್ಮವಿಶ್ವಾಸ ಪಡೆಯಬ ಹುದು ಎಂಬ ಲೆಕ್ಕಾಚಾರವನ್ನು ಡೇನಿಯಲ್ ವೆಟೋರಿ ಬಳಗ ಹೊಂದಿದೆ.
ಮೊದಲ ಅಭ್ಯಾಸ ಪಂದ್ಯದಲ್ಲಿ ಕಿವೀಸ್ ಐರ್ಲೆಂಡ್ ವಿರುದ್ಧ ಜಯ ಪಡೆದಿತ್ತು. ಇದೇ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆ ಅಭ್ಯಾಸ ಪಂದ್ಯ ನಡೆದಿತ್ತು. ಎರಡೂ ತಂಡಗಳ ನಾಯಕರು ಪಿಚ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಬುಧವಾರ ಇಲ್ಲಿನ ಪಿಚ್ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬುದನ್ನು ನೋಡಬೇಕು.
ತಂಡಗಳು
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯೂಸುಫ್ ಪಠಾಣ್, ಪಿಯೂಷ್ ಚಾವ್ಲಾ, ಹರಭಜನ್ ಸಿಂಗ್, ಆರ್. ಅಶ್ವಿನ್, ಜಹೀರ್ ಖಾನ್, ಆಶೀಶ್ ನೆಹ್ರಾ, ಮುನಾಫ್ ಪಟೇಲ್, ಎಸ್, ಶ್ರೀಶಾಂತ್.
ನ್ಯೂಜಿಲೆಂಡ್: ಡೇನಿಯಲ್ ವೆಟೋರಿ (ನಾಯಕ), ಹಾಮಿಷ್ ಬೆನಟ್, ಜೇಮ್ಸ್ ಫ್ರಾಂಕ್ಲಿನ್, ಮಾರ್ಟಿನ್ ಗುಪ್ಟಿಲ್, ಜೇಮಿ ಹೌ, ಬ್ರೆಂಡನ್ ಮೆಕ್ಲಮ್, ನಥಾನ್ ಮೆಕ್ಲಮ್, ಕೈಲ್ ಮಿಲ್ಸ್, ಜೇಕಬ್ ಓರಮ್, ಜೆಸ್ಸಿ ರೈಡರ್, ಟಿಮ್ ಸೌಥಿ, ಸ್ಕಾಟ್ ಸ್ಟೈರಿಸ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್, ಲೂಕ್ ವುಡ್ಕಾಕ್.
ಆರಂಭ: ಮಧ್ಯಾಹ್ನ 2.30ಕ್ಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.