ಮಂಗಳೂರು: ಧಾರವಾಡದ ತನಿಷಾ ಶೀತಲ್ ಗೋಟಡಕಿ, ಕೊಡಗಿನ ಪ್ರಿಯಾಂಕ್ ನಾರಾಯಣ ಅವರು ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಚೆಸ್ ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ ಉತ್ತಮವಾಗಿ ಆಡಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟೂರ್ನಿಯ 9ನೇ ಸುತ್ತಿನಲ್ಲಿ ಈ ಆಟಗಾರರು 17 ವರ್ಷ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ ಎಂಟು ಪಾಯಿಂಟ್ಗಳನ್ನು ಗಳಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಗುರುವಾರ ನಡೆದ ಅಂತಿಮ ಸುತ್ತಿನ ಟೂರ್ನಿಯ ಇದೇ ವಿಭಾಗದಲ್ಲಿ ಉಡುಪಿಯ ಅಶ್ವಿನ್ ಕೊಟೇಶ್ವರ, ತುಮಕೂರಿನ ಆಫ್ರಿನ್ ತಬಸುಮ್ ತಲಾ 7.5 ಪಾಯಿಂಟ್ ದಾಖಲಿಸಿದರು.
ಕಳೆದ ಬಾರಿ ರಾಷ್ಟ್ರಮಟ್ಟದಲ್ಲಿ ಆಡಿದ್ದ ಧಾರವಾಡದ ಶ್ರೀಯಾ ಆರ್ ರೇವಣಕರ್ ಈ ಬಾರಿ 7 ಪಾಯಿಂಟ್ ದಾಖಲಿಸಿ 5ನೇ ಸ್ಥಾನ ಪಡೆದರು. 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡದ ಶಶಾಂಕ್ ಭಟ್ ಮೊದಲ ಸ್ಥಾನ ಗಳಿಸಿದರು.
ಬೆಳಗಾವಿ ಶ್ರೇಯಸ್ ಕುಲಕರ್ಣಿ, ದಕ್ಷಿಣ ಕನ್ನಡದ ಅರ್ಜುನ್ ರಾವ್, ಧಾರವಾಡದ ಆನಂದ ಸುಳ್ಳದ 7.5 ಪಾಯಿಂಟ್ ದಾಖಲಿಸಿ 2ನೇ ಸ್ಥಾನ ಗಳಿಸಿದರು. ಬೆಳಗಾವಿಯ ಮನೋಜ್ ಬಿ. ಕುಲಕರ್ಣಿ 7 ಪಾಯಿಂಟ್ ಗಳಿಸಿದರು.
14ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡದ ಶಿವ ಚೇತನ್ ಹಳಮನಿ 8.5 ಪಾಯಿಂಟ್ ಕಲೆ ಹಾಕಿ ಅಗ್ರ ಶ್ರೇಯಾಂಕ ಗಳಿಸಿದರು. ಪುತ್ತೂರಿನ ಶ್ರೀಕೃಷ್ಣ ಪ್ರಣಾಮ್ 8 ಪಾಯಿಂಟ್, 7ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿ ಮೊದಲನೆ ಸ್ಥಾನದಲ್ಲಿದ್ದ ಬೆಳಗಾವಿಯ ಪಂಕಜ್ ಭಟ್ 7.5 ಪಾಯಿಂಟ್ ಗಳಿಸಿದ್ದಾರೆ. ಬೆಳಗಾವಿಯ ಪ್ರಜ್ವಲ್ ಜೋಶಿ, ಧಾರವಾಡ ರಿಷಬ್ ಹಾನಗಲ್ ತಲಾ 7 ಪಾಯಿಂಟ್ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ದೀಪ್ತಿ ಲಕ್ಷ್ಮಿ ಕೆ. 8 ಪಾಯಿಂಟ್ ದಾಖಲಿಸಿ ಅಗ್ರ ಶ್ರೇಯಾಂಕ ಪಡೆದರು. 7ನೇ ಸುತ್ತಿನಲ್ಲಿ 4 ನೇ ಸ್ಥಾನದಲ್ಲಿ ಇದ್ದ ದೀಪ್ತಿ ಗುರುವಾರ ಅಗ್ರ ಶ್ರೇಯಾಂಕ ಮುನ್ನಡೆ ಸಾಧಿಸಿದರು. ಹಾಸನದ ಧನ್ಯಶ್ರೀ ಪಿ, ಶಿವಮೊಗ್ಗದ ಖುಷಿ ಎಂ.ಹೊಂಬಳ, ವಿನುತಾ ಎಂ.ದೇವಾಡಿಗ 7.5 ಪಾಯಿಂಟ್ ದಾಖಲಿಸಿ 2ನೇ ಸ್ಥಾನ ಗಳಿಸಿದರು. ದಕ್ಷಿಣ ಕನ್ನಡದ ಸೃಜನಾ ವಿ. ಭಂಡಾರಿ 7 ಪಾಯಿಂಟ್ ಪಡೆದರು. ಸ್ಪಂದನಾ ರಾಯ್ಕರ್ 13ನೇ ಸ್ಥಾನ ಪಡೆದರು.
*
ನನ್ನ ಕ್ರೀಡಾ ಭವಿಷ್ಯಕ್ಕೆ ಹೊಸ ತಿರುವು ನೀಡಿದ ಟೂರ್ನಿ ಇದಾಗಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದು ಖುಷಿ ತಂದಿದೆ.
–ತನಿಷಾ ಶೀತಲ್ ಗೋಟಡ್ಕೆ,
ಧಾರವಾಡದ ಕ್ರೀಡಾಪಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.