ಬೆಂಗಳೂರು: ಸ್ಥಳೀಯ ಗಾಲ್ಫ್ ತಾರೆಗಳಾದ ಎಸ್.ಚಿಕ್ಕರಂಗಪ್ಪ ಹಾಗೂ ಅದಿತಿ ಅಶೋಕ್ ಅವರು ಇಲ್ಲಿ ನಡೆಯುತ್ತಿರುವ ಟೊಯೊಟಾ-ಐಜಿಯು ದಕ್ಷಿಣ ಭಾರತ ಜೂನಿಯರ್ ಗಾಲ್ಫ್ ಚಾಂಪಿಯನ್ಷಿಪ್ನ ಎರಡನೇ ದಿನವೂ ಪ್ರಾಬಲ್ಯ ಮೆರೆದರು.
ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್ನಲ್ಲಿ ಬುಧವಾರ ನಡೆದ ಪೈಪೋಟಿಯ ಬಾಲಕರ ಎ-ಬಿ ವಿಭಾಗದಲ್ಲಿ ಚಿಕ್ಕರಂಗಪ್ಪ (69+67=136) ಅವರು ಮುನ್ನಡೆ ಕಾಯ್ದುಕೊಂಡರು. ಈ ವಿಭಾಗದಲ್ಲಿ ರಾಹುಲ್ ರವಿ (70+75=145), ಹರ್ಜೋತ್ ಸಿಂಗ್ ಸೋನಿ (72+74=146) ಹಾಗೂ ತ್ರಿಶೂಲ್ ಚಿನ್ನಪ್ಪ (76+71=147) ಅವರು ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಬಾಲಕಿಯರ ಎ-ಬಿ ವಿಭಾಗದಲ್ಲಿ ಅದಿತಿ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದ್ದಾರೆ.
ಎರಡನೇ ದಿನವೂ ಅವರು ನಿಖರವಾಗಿ ಕ್ಲಬ್ ಬೀಸುವ ಮೂಲಕ ಗಮನ ಸೆಳೆದರು. ಅದಿತಿ (75+80= 155) ಬಾಕಿ ಸ್ಪರ್ಧಿಗಳಿಗಿಂತ ಬಹಳಷ್ಟು ಮುಂದಿದ್ದಾರೆ. ಮಿಲಿ ಸರೋಹಾ (83+78=161), ತ್ವೇಶಾ ಮಲಿಕ್ (77+86=163), ರಕ್ಷಾ ಪಡ್ಕೆ (87+78=165) ಹಾಗೂ ನಿಕಿತಾ ಅರ್ಜುನ್ (84+84=168) ಅವರು ಅದಿತಿಗೆ ನಿಕಟ ಪೈಪೋಟಿ ನೀಡುವಂಥ ಸ್ಥಿತಿಯಲ್ಲಿ ಇಲ್ಲ.
ಪಿಯೂಶ್ ಸಂಗ್ವಾನ್ (152), ವಿರಾಜ್ ಮಾದಪ್ಪ (159) ಮತ್ತು ಶಿವ್ ಶ್ರೀನಿವಾಸನ್ (160) ಅವರು ಬಾಲಕರ ಬಿ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಸಿ ವಿಭಾಗದಲ್ಲಿ ಅರ್ಜುನ್ ಪುರಿ (162) ಮತ್ತು ತನ್ವೀರ್ ಕಹ್ಲೊನ್ (162) ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. 36 ಹೋಲ್ಗಳ ನಂತರ ಇವರಿಬ್ಬರ ಸ್ಕೋರ್ ಸಮವಾಗಿದೆ.
ಬಾಲಕಿಯರ ಸಿ ವಿಭಾಗದಲ್ಲಿ ಸುಚಿತ್ರಾ ರಮೇಶ್ (178), ಶ್ರುತಿ ಶೆಣೈ (189), ರಿಯಾ ಅಹುಜಾ (198) ಹಾಗೂ ಅರುಶಿ ಪಾಂಡೆ (198) ಅವರು ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.
ಆದರೆ ಸುಚಿತ್ರಾ ಹೆಚ್ಚು ಉತ್ತಮ ಸ್ಥಿತಿಯಲ್ಲಿದ್ದಾರೆ. ಬಿ ವಿಭಾಗದಲ್ಲಿ ಅದಿತಿ ಅಶೋಕ್ (155) ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ.
ರಿಧಿಮಾ ದಿಲಾವರಿ (171) ಹಾಗೂ ಗುರುಜೋತ್ ಬಡ್ವಾಲ್ (179) ಅವರು ಅದಿತಿಯಿಂದ ತುಂಬಾ ಹಿಂದೆ ಉಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.