ಹುಬ್ಬಳ್ಳಿ: ನಗರದ ವಾಸು ಇಲೆವೆನ್ ತಂಡ ಸೆಟ್ಲ್ಮೆಂಟ್ ಹಾಕಿ ಮೈದಾನದಲ್ಲಿ ನಡೆದ ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಭಾನುವಾರ 3-0 ಅಂತರಿಂದ ಕೊಲ್ಲಾಪುರದ ಎಂಕೆಎಂ ತಂಡವನ್ನು ಪರಾಭವಗೊಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜಯಿ ತಂಡದ ಪರವಾಗಿ ದರ್ಶನ (42ನೇ ನಿಮಿಷ), ರಫೀಕ್ (46) ಮತ್ತು ಪ್ರಕಾಶ ಚಳಕೆ (53) ಗೋಲು ಗಳಿಕೆಯಲ್ಲಿ ಯಶ ಕಂಡರು. ಪಂದ್ಯದ ಪೂರ್ವಾರ್ಧದ ಆಟದಲ್ಲಿ ಎರಡೂ ತಂಡಗಳು ರಕ್ಷಣೆಗೆ ಒತ್ತು ನೀಡಿದ್ದರಿಂದ ಗೋಲಿನ ಬರ ಅನುಭವಿಸಿದವು.
ಆದರೆ, ಉತ್ತರಾರ್ಧದ ಆಟದಲ್ಲಿ ಆತಿಥೇಯ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆಟದ ಬಹುತೇಕ ಸಮಯ ಚೆಂಡು ಕೊಲ್ಲಾಪುರ ತಂಡದ ಗೋಲು ಪೆಟ್ಟಿಗೆ ಹತ್ತಿರವೇ ಸುಳಿದಾಡಿತು. ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದ ಹುಬ್ಬಳ್ಳಿ ತಂಡ ಗೆಲುವಿನ ನಗು ಹೊರಸೂಸಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಕೊಲ್ಲಾಪುರ ತಂಡ 3-2ರಿಂದ ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ `ಬಿ~ ತಂಡವನ್ನು; ವಾಸು ಇಲೆವನ್ ತಂಡ 1-0ಯಿಂದ ಗದಗಿನ ಹನುಮಾನ್ ಬ್ಲೆಸ್ಸಿಂಗ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಪರಾಭವಗೊಳಿಸಿತು. ಮೂರನೇ ಸ್ಥಾನಕ್ಕೆ ಗದಗ ತಂಡ 3-1ರಿಂದ ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ತಂಡದ ವಿರುದ್ಧ ಜಯ ಸಾಧಿಸಿತು.
ಮಹಾರಾಷ್ಟ್ರ ಹಿರಿಯ ಆಟಗಾರ ಸಂಜಯ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ ವಿಜೇತರಿಗೆ ಟ್ರೋಫಿ ವಿತರಿಸಿದರು.