ಬೊಮ್ಮನಹಳ್ಳಿ: ಕೋಡಿಚಿಕ್ಕನಹಳ್ಳಿಯ ಬಡಾವಣೆಗಳ ಮನೆಗಳಿಗೆ ಮಳೆನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ವೆಂಕಟೇಶ್ವರ ದೇವಸ್ಥಾನದ ಬಳಿ ಚರಂಡಿ ಪಕ್ಕದಲ್ಲೇ ಇರುವ ಕೆಲವು ಅಂಗಡಿಗಳು ಹಾಗೂ ಅಂಗನವಾಡಿ ಕೇಂದ್ರಕ್ಕೂ ನೀರು ನುಗ್ಗಿತ್ತು. ಮನೆಗಳ ನೀರಿನ ಸಂಪುಗಳಿಗೆ ಚರಂಡಿ ನೀರು ಸೇರಿತ್ತು. ಹಾಗಾಗಿ ಜನ ನೀರಿಗಾಗಿ ಪರಿತಪಿಸಿದರು.
ಕೋಡಿಚಿಕ್ಕನಹಳ್ಳಿಯಿಂದ ಹಾದುಹೋಗುವ ಬಿಳೇಕಹಳ್ಳಿ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
‘ಚರಂಡಿಗಳಲ್ಲಿ ಹೂಳು ತುಂಬಿದೆ. ಇದರಿಂದಾಗಿಯೇ ಗಲೀಜು ನೀರು ಮನೆಗಳಿಗೆ ನುಗ್ಗಿದೆ’ ಎನ್ನುವುದು ಸ್ಥಳೀಯರ ಆರೋಪ.
‘ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆ ಬಿಟ್ಟು ಹೋಗಿದ್ದಾರೆ. ಆ ಮಣ್ಣು ಚರಂಡಿ ಸೇರಿ ಮೂರು ಅಡಿ ಹೂಳು ತುಂಬಿದೆ’ ಎನ್ನುತ್ತಾರೆ ಸ್ಥಳೀಯರಾದ ಪುನೀತ್.
‘ಪ್ರತಿಸಲ ಮಳೆ ಬಂದಾಗಲೂ ನಮ್ಮ ಮನೆಗೆ ನೀರು ನುಗ್ಗುತ್ತದೆ. ಅಧಿಕಾರಿಗಳು ಬರುತ್ತಾರೆ. ನಾಳೆಯೇ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಮತ್ತೆ ಎಂದೂ ಇತ್ತ ತಲೆ ಹಾಕುವುದಿಲ್ಲ’ ಎಂದು ಗೃಹಿಣಿ ಸ್ವಪ್ನ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿ ಮಳೆಗಾಲದಲ್ಲಿ ನೆರೆ ಸಂಭವಿಸುವ ಕುರಿತು ಜಂಟಿ ಆಯುಕ್ತರ ಗಮನ ಸೆಳೆಯುತ್ತಲೇ ಬಂದಿದ್ದೇವೆ. ವಾರ್ಡ್ ಕಚೇರಿ ಎದುರೇ ಚರಂಡಿ ಕಟ್ಟಿಕೊಂಡಿದ್ದರೂ ಎಂಜಿನಿಯರ್ಗಳು ಗಮನ ಹರಿಸುತ್ತಿಲ್ಲ’ ಎಂದು ಸ್ಥಳೀಯರಾದ ರಾಜಶೇಖರ್ ತಿಳಿಸಿದರು.
ಮನೆಗಳಿಗೆ ನೀರು ನುಗ್ಗಿದ್ದ ಪ್ರದೇಶಕ್ಕೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತೆ ಸೌಜನ್ಯ ಭೇಟಿ ನೀಡಿ ಪರಿಶೀಲಿಸಿದರು.