ಬೆಂಗಳೂರು: ‘ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2010ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಅಪರಾಧಿ ಗೌಹರ್ ಅಜೀಜ್ ಖುಮಾನಿಯನ್ನು ಅಕ್ರಮ ಬಂಧನದಲ್ಲಿಡಲಾಗಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಬೇಕು’ ಎಂದು ಕೋರಿ ಗೌಹರ್ ಅಜೀಜ್ ಖುಮಾನಿಯ ಅಣ್ಣ ಹಸನ್ ಅಜೀಜ್ ಅಮೀರ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಈ ಕುರಿತಂತೆ ಅಧೀನ ನ್ಯಾಯಾಲಯದಲ್ಲೇ ಸ್ಪಷ್ಟನೆ ಪಡೆಯಿರಿ’ ಎಂದು ಅರ್ಜಿದಾರರಿಗೆ ನಿರ್ದೇಶಿಸಿದೆ.
ಕೋರಿಕೆ ಏನು?: ‘ಹೈಕೋರ್ಟ್ ಆದೇಶದ ಅನುಸಾರ ನಾನು ದಂಡವನ್ನು ಪಾವತಿಸಿದ್ದೇನೆ ಹಾಗೂ ಇಳಿಕೆಯಾಗಿರುವ ಶಿಕ್ಷಾ ಅವಧಿಯ ಆದೇಶ ಸ್ಪಷ್ಟವಾಗಿಲ್ಲ ಎಂದು ಜೈಲು ಅಧಿಕಾರಿಗಳು ನನ್ನ ಸಹೋದರನನ್ನು ಬಿಡುಗಡೆ ಮಾಡುತ್ತಿಲ್ಲ. ಇದು ಅಕ್ರಮ ಬಂಧನ’ ಎಂದು ಅರ್ಜಿದಾರರು ದೂರಿದ್ದರು.