ಹುಬ್ಬಳ್ಳಿ: ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ನ ಮಹಾನಗರ ಯುವ ಘಟಕದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಟೈರಿಗೆ ಬೆಂಕಿ ಹಾಕಿದ ಅವರು, ಕೆಲ ಕಾಲ ರಸ್ತೆ ತಡೆ ನಡೆಸಿದರು. ಶಾಸಕರ ಖರೀದಿಸುವ ಪ್ರಯತ್ನ ನಿಲ್ಲಿಸದಿದ್ದರೆ ಬಿಜೆಪಿ ಶಾಸಕರು ಹಾಗೂ ಮುಖಂಡರ ಕಚೇರಿ– ಮನೆಗೆ ಮುತ್ತಿಗೆ ಹಾಕವುದಾಗಿ ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಮತ್ತು ಅಮಿತ್ ಶಾ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿರುವ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಹರ್ಯಾಣದ ಗುರುಗ್ರಾಮದ ಐಷಾರಾಮಿ ಹೋಟೆಲ್ನಲ್ಲಿ ಶಾಸಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ದಿನವೊಂದಕ್ಕೆ ಪ್ರತಿ ಶಾಸಕರ ಊಟ– ಉಪಹಾರದ ವೆಚ್ಚವೇ ₹24 ಸಾವಿರ ಎಂದು ತಿಳಿದು ಬಂದಿದೆ. ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಬಿಜೆಪಿ ಆಗುತ್ತಿಲ್ಲ. ಅದೇ ಕಾರಣಕ್ಕೆ ಸರ್ಕಾರ ಕೆಡವಲು ಮುಂದಾಗಿದೆ ಎಂದು ಆರೋಪಿಸಿದರು.
ಯುವ ಜನತಾದಳ ಮಹಾನಗರ ಘಟಕದ ಅಧ್ಯಕ್ಷ ನವೀನ ಮುನಿಯಪ್ಪನವರ ಮಾತನಾಡಿ, ಪ್ರತಿ ಶಾಸಕರಿಗೆ ₹60ರಿಂದ ₹100 ಕೋಟಿ ನೀಡುವ ಭರವಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಯಡಿಯೂರಪ್ಪ ಅವರು ತಮ್ಮ ಸರ್ಕಾರ ಇದ್ದಾಗ ಗಣಿ ಹಗರಣ ಮತ್ತು ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನೇ ಈಗ ಬಳಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಮುಖಂಡರಾದ ನಾಗರಾಜ ಪಾಟೀಲ, ರವೀಂದ್ರ ಕಟ್ಟಿಮನಿ, ಕಲಂದರ್ ಮುಲ್ಲಾ, ಸುಶಾಂತ್ ದಾಂಡೋಲಿ, ಶ್ರೀಕಾಂತ ಬಡಕಣ್ಣವರ, ಫೈರೋಜ್ ಅಹ್ಮದ್ ಧಾರವಾಡ ಇದ್ದರು.