ಬೆಂಗಳೂರು: ತಲಘಟ್ಟಪುರದ 80 ಅಡಿ ರಸ್ತೆಯಲ್ಲಿ ಲಾರಿ ಚಾಲಕ ಭಾಸ್ಕರ್ (44) ಎಂಬುವರನ್ನು ಕೊಂದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಲಘಟ್ಟಪುರದ ತೌಹೀದ್ ಅಲಿಯಾಸ್ ವರ್ದಾ, ಮುದಾಸೀರ್ ಹಾಗೂ ಸಲ್ಮಾನ್ ಬಂಧಿತರು. ಲಾರಿಗಳನ್ನು ಅಡ್ಡಗಟ್ಟುತ್ತಿದ್ದ ಆರೋಪಿಗಳು, ಮಾರಕಾಸ್ತ್ರತೋರಿಸಿ ಚಾಲಕರನ್ನು ದರೋಡೆ ಮಾಡುತ್ತಿದ್ದರು. ಲಾರಿ ಚಾಲಕರ ವೇಷದಲ್ಲೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ನ. 3ರಂದು ನಸುಕಿನಲ್ಲಿ ಭಾಸ್ಕರ್, ತಲಘಟ್ಟಪುರದ 80 ಅಡಿ ರಸ್ತೆ ಮೂಲಕ ಲಾರಿ ತೆಗೆದುಕೊಂಡು ಹೊರಟಿದ್ದರು. ಲಾರಿ ಅಡ್ಡಗಟ್ಟಿದ್ದ ಆರೋಪಿಗಳು, ಅವರ ಬಳಿಯ ಹಣ ಕಿತ್ತುಕೊಳ್ಳಲು ಯತ್ನಿಸಿದ್ದರು. ಅದನ್ನು ವಿರೋಧಿಸುತ್ತಿದ್ದಂತೆ ಭಾಸ್ಕರ್ ಅವರಿಗೆ ಚಾಕುವಿನಿಂದ ಇರಿದು ಕೊಂದಿದ್ದರು. ಅದಾದ ಮರುದಿನ ಮತ್ತೊಬ್ಬ ಚಾಲಕನಿಗೂ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆರೋಪಿಗಳ ದೃಶ್ಯ ಅಸ್ಪಷ್ಟವಾಗಿತ್ತು. ಆರೋಪಿಗಳು, ಪುನಃ ಲಾರಿ ಚಾಲಕರನ್ನು ದರೋಡೆ ಮಾಡಲು ರಸ್ತೆಗೆ ಬರುತ್ತಾರೆ ಎಂಬ ಮಾಹಿತಿ ಇತ್ತು. ಅದೇ ಕಾರಣಕ್ಕೆ ಪೊಲೀಸರೇ ಲಾರಿಯೊಂದನ್ನು ತೆಗೆದುಕೊಂಡುತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ಓಡಾಡಲಾರಂಭಿಸಿದ್ದರು.
ಪೊಲೀಸರ ಲಾರಿಯನ್ನೇ ತಡೆದಿದ್ದ ಆರೋಪಿಗಳು, ಚಾಕು ತೋರಿಸಿ ದರೋಡೆಗೆ ಯತ್ನಿಸಿದ್ದರು. ಅವಾಗಲೇ ಮಫ್ತಿಯಲ್ಲಿದ್ದ ಪೊಲೀಸರು ಆರೋಪಿಗಳನ್ನು ಹಿಡಿದುಕೊಂಡರು ಎಂದು ವಿವರಿಸಿದರು.