ಬೆಂಗಳೂರು: ಹೆಬ್ಬಾಳ ಉಪಚುನಾವಣೆ ಸಂದರ್ಭದಲ್ಲಿ ತಮ್ಮ ವಿರುದ್ಧ ಅನಗತ್ಯ ಕೇಸು ದಾಖಲು ಮಾಡಿ, ಮೂರು ವರ್ಷಗಳ ಬಳಿಕ ಶಾಸಕರು ನಾಪತ್ತೆ ಆಗಿದ್ದಾರೆಂದು ಚಾರ್ಜ್ಶೀಟ್ ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ವೆರ್ಣೇಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹಕ್ಕುಚ್ಯುತಿ ಮಂಡಿಸಿದರು.
ಕ್ಷೇತ್ರದಲ್ಲಿ ಸದಾ ಓಡಾಡುತ್ತಿರುತ್ತೇನೆ. ನನ್ನ ವಿರುದ್ಧ ಎಫ್ಐಎಆರ್ ದಾಖಲಿಸಿದ ನಂತರ 28ಕ್ಕೂ ಹೆಚ್ಚು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅದಕ್ಕೆ ಪೊಲೀಸ್ ರಕ್ಷಣೆಯೂ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತಲೆ ಮರೆಸಿಕೊಂಡಿದ್ದೇನೆ ಎಂದು ಯಾವ ಆಧಾರದಲ್ಲಿ ಹೇಳಿದ್ದಾರೆ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
‘ನನ್ನ ಮೇಲೆ ಮಾತ್ರವಲ್ಲದೆ, ನನ್ನ ಹೆಂಡತಿ ಮೇಲೂ ಎಫ್ಐಆರ್ ಹಾಕಿದ್ದಾರೆ. ಒಂದು ವೇಳೆ ನಾನು ಕಾನೂನು ಉಲ್ಲಂಘಿಸಿದ್ದರೆ, ತನಿಖೆ ಎದುರಿಸಲು ತಯಾರಿದ್ದೇನೆ. ಆದರೆ, ಪೊಲೀಸ್ ಅಧಿಕಾರಿ ದುರುದ್ದೇಶದಿಂದ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ’ ಎಂದರು.