ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ತಮಗೆ ನಿರಂತರವಾಗಿ ಕರೆಗಳು ಬರುತ್ತಿದ್ದು, ₹ 1.5 ಕೋಟಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಉದ್ಯಮಿಯೊಬ್ಬರು ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಜ.12ರ ಬೆಳಿಗ್ಗೆ ಮೊದಲ ಸಲ ಆ ಸಂಖ್ಯೆಯಿಂದ ಕರೆ ಬಂದಿತ್ತು. ನಾನು ಸ್ವೀಕರಿಸಿರಲಿಲ್ಲ. ರಾತ್ರಿ 8 ಗಂಟೆಗೆ ಪುನಃ ಕರೆ ಬಂದಾಗ ಪತ್ನಿ ಮಾತನಾಡಿದ್ದಳು. ‘ನಾನು ಮಂಗಳೂರಿನ ಡಾನ್ ರವಿ ಪೂಜಾರಿ ಮಾತನಾಡುತ್ತಿದ್ದೇನೆ. ಯಾಕೆ ಕರೆ ಮಾಡಿದ್ದೇನೆ ಎಂಬುದು ಗೊತ್ತಿರಬೇಕಲ್ವ? ನೀವು ದೊಡ್ಡ ಬಿಸಿನೆಸ್ಮನ್ ಎಂದು ನನಗೆ ಗೊತ್ತು. 10 ದಿನಗಳ ಒಳಗಾಗಿ ₹ 1.5 ಕೋಟಿ ಕೊಡಬೇಕು. ನನ್ನ ಹುಡುಗರು ಮನೆ ಹತ್ತಿರ ಓಡಾಡುತ್ತಿದ್ದಾರೆ. ನನ್ನ ಮಾತನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ’ ಎಂದುವಿನಾಯಕ ಲೇಔಟ್ನ ಕೆ.ಎನ್.ನಟರಾಜ್ ದೂರು ಕೊಟ್ಟಿದ್ದಾರೆ.
‘ಜ.26ರ ಹಾಗೂ ಜ.27ರಂದು ಪುನಃ ಆ ಸಂಖ್ಯೆಯಿಂದ ಕರೆಗಳು ಬಂದಿವೆ. ಇದರಿಂದ ನಮ್ಮ ಕುಟುಂಬ ಆತಂಕದಲ್ಲಿದೆ. ಆರೋಪಿಯನ್ನು ಪತ್ತೆ ಮಾಡಿ, ನಮಗೆ ರಕ್ಷಣೆ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ. ವಿಜಯನಗರ ಪೊಲೀಸರು ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.