ಬೆಂಗಳೂರು:ಆರೋಗ್ಯ ಸಚಿವ ಶಿವಾನಂದ ಪಾಟೀಲರ ಆಪ್ತ ಸಹಾಯಕರಿಬ್ಬರು ವರ್ಗಾವಣೆಗೆ ಸಂಬಂಧಿಸಿದಂತೆ ವೈದ್ಯರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೊವೊಂದನ್ನು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಸೋಮವಾರ ಬಿಡುಗಡೆ ಮಾಡಿದರು. ಈ ಸಂಬಂಧ ಎಸಿಬಿಗೂ ದೂರು ನೀಡಿದ್ದಾರೆ.
‘ಸಚಿವರ ಆಪ್ತ ಸಹಾಯಕ ಮರೇಗೌಡ ಮತ್ತು ಸಚಿವರ ಆಪ್ತ ಜ್ಯೋತಿ ಖಾನ್, ವರ್ಗಾವಣೆಗೆ ಸಂಬಂಧಿಸಿ ವೈದ್ಯರ ಬಳಿ ₹25 ಲಕ್ಷದಿಂದ ₹30 ಲಕ್ಷ ಲಂಚ ಕೇಳಿದ್ದಾರೆ’ ಎಂದರು.
ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿರುವ ಶಿವಾನಂದ ಪಾಟೀಲರು, ‘ನನ್ನ ಆಪ್ತ ಸಹಾಯಕರನ್ನು ವರ್ಗಾವಣೆ ಹಗರಣದಲ್ಲಿ ಸಿಲುಕಿಸಲು, ಕೆಲವರು ಷಡ್ಯಂತ್ರ ರೂಪಿಸಿ ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ. ಅದನ್ನುಆಧರಿಸಿ, ರವಿ ಕೃಷ್ಣಾರೆಡ್ಡಿ ಕೆಲ ಆರೋಪಗಳನ್ನು ಮಾಡಿದ್ದು, ಅವುಗಳು ನಿರಾಧಾರ’ ಎಂದರು.