ಹುಬ್ಬಳ್ಳಿ: ರೇವಡಿಹಾಳದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿದ್ದ ನಿವೇಶಗಳನ್ನು ಅನರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಖಂಡಿಸಿ ಬಹುಜನ ಸಮಾಜ ಪಕ್ಷದ ನೇತೃತ್ವವದಲ್ಲಿ ನಿವೇಶನ ವಂಚಿತರು ಶುಕ್ರವಾರ ಪಾದಯಾತ್ರೆ ನಡೆಸಿದರು.
ರೇವಡಿಹಾಳದಿಂದ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿದ ಅವರು, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಸ್ಥಳೀಯರಲ್ಲದ ಹಾಗೂ ಅನರ್ಹರಿಗೆ ನಿವೇಶ ನೀಡಲಾಗಿದೆ. ಆ ಬಗ್ಗೆ ಈ ಕೂಡಲೇ ತನಿಖೆ ನಡೆಸಬೇಕು. ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ 25 ವರ್ಷಗಳ ಹಿಂದೆ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿತ್ತು. ಆದರೆ ಯಾವುದೇ ನಿಯಮಗಳನ್ನು ಪಾಲಿಸದ ಕಾರಣ ಊರಿನವರಿಗೆ ನಿವೇಶನ ಸಿಕ್ಕಿಲ್ಲ. ಅನ್ಯಾಯಕ್ಕೆ ಒಳಗಾದವರಿಗೆ ಈಗಲಾದರೂ ನ್ಯಾಯ ಕೊಡಿಸಬೇಕು. ದಲಿತರಿಗೆ ಅನ್ಯಾಯ ಮಾಡಿರುವವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ವೀರಪ್ಪ ಮಾದಾರ್, ಸುರೇಶ ಖಾನಾಪುರ್, ವಿಜಯ್ ಕರ್ರ ಇದ್ದರು.