ಬೊಮ್ಮನಹಳ್ಳಿ: ವಿರಾಟ್ ನಗರದ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಬಿಜೆಪಿಗೆ ಮತ ನೀಡುವಂತೆ ಮತದಾರರಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮತಗಟ್ಟೆ 196ರಲ್ಲಿ ನವೀನ್ ಎಂಬ ಸಿಬ್ಬಂದಿಯೊಬ್ಬರು ಹಿರಿಯ ನಾಗರಿಕರಿಗೆ ‘ಕ್ರಮಸಂಖ್ಯೆ ಒಂದನ್ನು ಒತ್ತಿ’ ಎಂದು ಹೇಳುತ್ತಿದ್ದರೆಂದು ಮತಗಟ್ಟೆಯಲ್ಲಿದ್ದ ಕಾಂಗ್ರೆಸ್ ಏಜೆಂಟ್ ಆಕ್ಷೇಪಿಸಿ ಹೊರಬಂದು, ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು.
ವಿರಾಟ್ ನಗರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಮಾಡಲು ಬಂದ ಪ್ರಕಾಶ್ ಎಂಬ ವ್ಯಕ್ತಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದರು. ಅರಕೆರೆ, ಹೊಂಗಸಂದ್ರ, ಇಬ್ಬಲೂರು ಪ್ರದೇಶದ ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ 2 ತಾಸು ಮತದಾನ ವಿಳಂಬವಾಯಿತು.
‘ಅರಕೆರೆ ಉಪ ವಿಭಾಗ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ಮತದಾರರ ಹೆಸರು ಬಿಟ್ಟಿಹೋಗಿದೆ. ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರ ಇದೆ’ ಎಂದು ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.