ತೂತ್ತುಕುಡಿ: ತೂತ್ತುಕುಡಿ ಜಿಲ್ಲೆಯಲ್ಲಿ ಪೊಲೀಸ್ ವಶದಲ್ಲಿದ್ದಾಗಲೇ ತಂದೆ ಮತ್ತು ಮಗ ಸಾವನ್ನಪ್ಪಿದ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸರನ್ನು ಗುರುವಾರ ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಇನ್ಸ್ಪೆಕ್ಟರ್ ಶ್ರೀಧರ್, ಹೆಡ್ಕಾನ್ಸ್ಟೆಬಲ್ ಮುರುಗನ್ ಮತ್ತು ಸಬ್ ಇನ್ಸ್ಪೆಕ್ಟರ್ ಬಾಲಕೃಷ್ಣನ್ ಅವರನ್ನುಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಬಂಧಿಸಿದ್ದಾರೆ.
ಬುಧವಾರ ರಾತ್ರಿಸಬ್ ಇನ್ಸ್ಪೆಕ್ಟರ್ ರಘು ಗಣೇಶ್ ಅವರನ್ನು ಬಂಧಿಸಲಾಗಿತ್ತು.ಈ ಪ್ರಕರಣದಲ್ಲಿ ಈವರೆಗೆ ಒಟ್ಟು ನಾಲ್ವರು ಪೊಲೀಸರ ಬಂಧನವಾಗಿದೆ.
ಮದ್ರಾಸ್ ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಂಡ ಒಂದು ಗಂಟೆಯೊಳಗೆ ಸಿಐಡಿ ಎಫ್ಐಆರ್ ಬದಲಿಸಿದ್ದು, ತಂದೆ, ಮಗನ ಸಾವಿಗೆ ಪೊಲೀಸರ ಹಿಂಸೆಯೇ ಕಾರಣವೆಂದು ಉಲ್ಲೇಖಿಸಿದೆ.
‘ಈ ಪ್ರಕರಣದ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಕೊಡಿಸಲು ಸರ್ಕಾರ ಬದ್ಧವಾಗಿದೆ’ ಎಂದು ಕಾನೂನು ಸಚಿವ ಸಿ.ವಿ. ಷಣ್ಮುಗಂ ತಿಳಿಸಿದ್ಧಾರೆ.
‘ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.