ಜೈಪುರ: ರಾಜಸ್ಥಾನ ವಿಧಾನಸಭೆಯ ಅಧಿವೇಶನ ಕರೆಯದಂತೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರ ಮೇಲೆ ಒತ್ತಡವಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ಆರೋಪಿಸಿದ್ದಾರೆ.
ಅಧಿವೇಶನ ಕರೆಯುವಂತೆ ಸರ್ಕಾರ ರಾಜ್ಯಪಾಲರನ್ನು ಕೋರಿದೆ. ಆದರೆ, ರಾಜ್ಯಪಾಲರು ಈ ವರೆಗೆ ಆದೇಶ ಹೊರಡಿಸಿಲ್ಲ ಎಂದೂ ಗೆಹ್ಲೋಟ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲ್ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ಸೋಮವಾರದಿಂದ ವಿಧಾನಸಭೆ ಅಧಿಕವೇಶನ ನಡೆಯಬೇಕು ಎಂದು ನಾವು ಕೋರುತ್ತಿದ್ದೇವೆ. ಆದರೆ, ಒತ್ತಡದಲ್ಲಿರುವ ರಾಜ್ಯಪಾಲರು ಅಧಿವೇಶನ ಕರೆಯಲು ಆದೇಶ ನೀಡುತ್ತಿಲ್ಲ ಎಂದು ಹೇಳಿದರು.
‘ಅಧಿವೇಶನದ ಬಗ್ಗೆ ಗುರುವಾರ ರಾತ್ರಿ ಆದೇಶ ಹೊರಡಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ, ಇಡೀ ರಾತ್ರಿ ಕಾದರೂ ಅವರ ಕಡೆಯಿಂದ ಯಾವುದೇ ಉತ್ತರವಿಲ್ಲ" ಎಂದು ಅವರು ಹೇಳಿದರು.
ಇತ್ತೀಚಿಗೆ ನಡೆದ ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಗೆಹ್ಲೋಟ್, ‘ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಲು, ಕೊರೊನಾ ವೈರಸ್ ಮತ್ತು ಅದರಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಆಗಿರುವ ಪರಿಣಾಮಗಳ ಕುರಿತು ಸಮಾಲೋಚನೆ ನಡೆಸಲು ವಿಧಾನಸಭೆ ಅಧಿವೇಶನ ಕರೆಯುವಂತೆ ನಾವು ರಾಜ್ಯಪಾಲರನ್ನು ಕೋರಿದ್ದೇವೆ,’ ಎಂದು ಹೇಳಿದ್ದರು.
ರಾಜಭವನಕ್ಕೆ ಶಾಸಕರು
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಬೆಂಬಲಿಗ ಶಾಸಕರನ್ನು ರಾಜಭವನದ ಅಂಗಳಕ್ಕೆ ಕರೆದೊಯ್ದಿದ್ದಾರೆ. ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಶಾಸಕರು ರಾಜಭವನದ ಅಂಗಳದಲ್ಲಿ ಘೋಷಣೆ ಕೂಗಿದ್ದಾರೆ.
#WATCH Rajasthan: Congress MLAs supporting Chief Minister Ashok Gehlot sit and raise slogans at Raj Bhawan.
— ANI (@ANI) July 24, 2020
The Chief Minister had met Governor Kalraj Mishra this afternoon over the issue of the convening of the Assembly Session. pic.twitter.com/m6XhwwMuM2
ರಾಜಸ್ಥಾನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರು, ಕಾಂಗ್ರೆಸ್ನ18 ಶಾಸಕರೊಂದಿಗೆ ಬಂಡಾಯವೆದ್ದಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರ ಬಹುಮತ ಹೊಂದಿರುವುದಾಗಿಯೂ, ಬಹುಮತ ಸಾಬೀತು ಮಾಡಲು ತಾವು ಸಿದ್ಧರಿರುವುದಾಗಿಯೂ ಸಿಎಂ ಗೆಹ್ಲೋಟ್ ಈಗಾಗಲೇ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.