ಜೈಪುರ:ವಿಧಾನಸಭೆಯ ಅಧಿವೇಶನ ನಡೆಸಲು ಅನುಮತಿ ಕೋರಿ ರಾಜಸ್ಥಾನ ಸರ್ಕಾರವು ಕಳುಹಿಸಿದ ಮೂರನೇ ಪ್ರಸ್ತಾವನೆಯೂ ತಿರಸ್ಕೃತಗೊಂಡಿದ್ದರಿಂದ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರುರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಬುಧವಾರ ಭೇಟಿಯಾದರು.
‘ಪ್ರೇಮ ಪತ್ರ ಈಗಾಗಲೇ ಬಂದಿದೆ. ನಾನೇ ಅವರ ಬಳಿ ಚಹಾ ಕುಡಿಯಲು ಹೋಗುತ್ತಿದ್ದೇನೆ’ ಎಂದು ಗೆಹ್ಲೋಟ್ ಅವರು ರಾಜ ಭವನಕ್ಕೆ ತೆರಳುವ ಮುನ್ನ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿದ್ದ ಪಕ್ಷದ ಕಾರ್ಯಕರ್ತರ ಬಳಿ ಹಾಸ್ಯ ಚಟಾಕಿ ಹಾರಿಸಿದರು.
ಹದಿನೈದು ನಿಮಿಷ ಅವರು ರಾಜ್ಯಪಾಲರೊಂದಿಗೆ ಸಭೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರೊಂದಿಗೆ ನಡೆಸಿದ ಎರಡನೇ ಸಭೆ ಇದಾಗಿದೆ.
‘ಪತ್ರವನ್ನು ಮೂರನೇ ಬಾರಿಗೆ ವಾಪಸ್ ಕಳುಹಿಸಿದ್ದೀರಿ. ನಿಮಗೆ ಏನುಬೇಕು ಎಂಬುದನ್ನು ತಿಳಿಸಿದರೆ, ಅದರಂತೆ ನಾವು ಕೆಲಸ ಮಾಡಲಿದ್ದೇವೆ’ ಎಂದು ಗೆಹ್ಲೋಟ್ ಅವರು ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ರಾಜ್ಯಪಾಲರನ್ನು ಉದ್ಧೇಶಿಸಿ ಹೇಳಿದರು.
ಜುಲೈ 31 ರಂದೇ ಅಧಿವೇಶನ ನಡೆಸುವಂತೆ ಪಟ್ಟು ಹಿಡಿದಿರುವ ರಾಜ್ಯ ಸಚಿವ ಸಂಪುಟ ಕಳೆದ ಸೋಮವಾರ ಈ ಸಂಬಂಧ,ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು.ಆದರೆ, ಪ್ರಸ್ತಾವನೆಯಲ್ಲಿ ಅಧಿವೇಶನದ ಸಂದರ್ಭದಲ್ಲಿ ವಿಶ್ವಾಸ ಮತಯಾಚನೆ ಮಾಡಲಿದೆಯೇ ಎಂಬ ವಿಚಾರವಾಗಿ ಸ್ಪಷ್ಟತೆ ಇರಲಿಲ್ಲ.
ರಾಜ್ಯಪಾಲರ ವಿರುದ್ಧ ಹೈಕೋರ್ಟ್ಗೆ ಮೊರೆ:ವಿಧಾನಸಭೆಯ ಅಧಿವೇಶನದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ವಕೀಲರೊಬ್ಬರುರಾಜಸ್ಥಾನ ಹೈಕೋರ್ಟ್ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.