ವಾಷಿಂಗ್ಟನ್ : ‘ಬಹುತ್ವ ಭಾರತದ ಅವಿಭಾಜ್ಯ ಅಂಗ. ಭಾರತವು ಧಾರ್ಮಿಕ ಮುಖಂಡರು ಆಳುವ ದೇಶವಾಗಿರಲಿಲ್ಲ. ಭವಿಷ್ಯದಲ್ಲಿಯೂ ಇಂಥ ರಾಷ್ಟ್ರವಾಗದು’ ಎಂದು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ (ಐಸಿಸಿಆರ್) ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಪ್ರತಿಪಾದಿಸಿದರು.
ಇಲ್ಲಿನ ಹಡ್ಸನ್ ಇನ್ಸ್ಟಿಟ್ಯೂಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನವ ಭಾರತದ ಭವಿಷ್ಯ ಹಾಗೂ ಸವಾಲುಗಳು’ ಎಂಬ ವಿಷಯ ಕುರಿತು ಮಾತನಾಡಿದ ಅವರು, ‘ಡಾ.ಬಿ.ಆರ್.ಅಂಬೇಡ್ಕರ್ ಪ್ರತಿ ಪಾದಿಸಿದಂತೆ, ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಜಾತಾಂತ್ರಿಕ ವ್ಯವಸ್ಥೆ ಇರುವ ದೇಶದ ನಿರ್ಮಾಣವೇ ನಮ್ಮ ಉದ್ದೇಶ’ ಎಂದರು.
‘ಭಾರತದಲ್ಲಿ ಬಹುತ್ವ, ಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಹಬಾಳ್ವೆ ಸಾಧಿಸಲು ಸರ್ಕಾರದ ಯೋಜನೆಗಳೇನು’ ಎಂದು ಕಾರ್ಯಕ್ರಮ ನಿರೂಪಕಿ ಅಪರ್ಣಾ ಪಾಂಡೆ ಪ್ರಶ್ನಿಸಿದರು.
‘ಈ ಮೊದಲು ಇಂತಹ ಘಟನೆಗಳೇ ಸಂಭವಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಇಂತಹ ವಿದ್ಯಮಾನಗಳು ನಡೆಯುತ್ತಿವೆ ಎಂಬಂತೆ ಬಿಂಬಿಸಲಾಗುತ್ತದೆ. ಇಂತಹ ವಿಷಯಗಳಿಗೆ ಮಾಧ್ಯಮಗಳಲ್ಲಿಯೂ ಹೆಚ್ಚು ಪ್ರಚಾರ ಸಿಗುತ್ತದೆ’ ಎಂದು ಸಹಸ್ರಬುದ್ಧೆ ಉತ್ತರಿಸಿದರು.
‘ಬಹುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಬಿಜೆಪಿಗೆ ಇರುವ ಬದ್ಧತೆ ಬಗ್ಗೆ ಸಂಶಯ ಬೇಡ’ ಎಂದರು.